Saturday, August 16, 2008

ದರಿದ್ರ ಜನಗಳ ದರಿದ್ರ ಅಭ್ಯಾಸಗಳು

ದರಿದ್ರ ಅಭ್ಯಾಸಗಳು ಅಂದ್ರೆ ನಾನು ಹೇಳ್ತಾ ಇರೋದು ಕುಡಿತ, ಬೀಡಿ, ಸಿಗರೇಟು, ಜೂಜು ಇತ್ಯಾದಿಗಳ ಬಗ್ಗೆ ಅಲ್ಲಾ. ಇವೆಲ್ಲಾ ಕೆಟ್ಟ ಅಭ್ಯಾಸಗಳು. ನಾನು ಹೇಳ ಹೊರಟಿರುವುದು ದರಿದ್ರ ಅಭಾಸಗಳ ಬಗ್ಗೆ.
ಇದು ನಾನು ನೀವು ಕಂಡ ಹಾಗೆ ಜನರು ರೂಢಿಸಿಕೊಂಡಿರೋ ದರಿದ್ರ ಅಭ್ಯಾಸಗಳು. ಜಾಗದ, ಸುತ್ತಮುತ್ತಲಿನ ಜನರ ಪರಿವೆಯೇ ಇಲ್ಲದಂತೆ ತಮ್ಮ ಪಾಡಿಗೆ ತಮ್ಮ ಈ ಕೆಲ್ಸವನ್ನು ಮುಂದುವರಿಸಿಕೊಂಡು ಹೋಗ್ತಾರಲ್ಲಾ, ಸ್ವಲ್ಪ ಕೂಡಾ ಡೀಸೆನ್ಸಿ, ಕಾಮನ್ ಸೆನ್ಸು ಇಲ್ಲವೇ ? ಇವೇ ಕೆಲವು ದರಿದ್ರ ಅಭ್ಯಾಸಗಳು ಜನರು ರೂಢಿಸಿಕೊಂಡಿರೋವಂಥವು.

೧. ಮೂಗಿನಲ್ಲಿ ಬೆರಳು ತೂರಿಸಿ ಕೆದಕುವುದು - ಏನೋ ಚಿನ್ನ ಸಿಗೋ ಥರಾ ಮೂಗೊಳಗೆ ಅರ್ಧಕ್ಕರ್ಧ ಬೆರಳು ತೂರಿಸಿ ಕೆದಕ್ತಾ ಇರ್ತಾರೆ. ಇನ್ನೂ ಹೊಲ್ಸು ಜನರನ್ನ ನೋಡಿದೀನಿ. ಬಸ್ ಸ್ಟಾಪಿನಲ್ಲಿ, ಬೇರೆ ನಾರ್ವಜನಿಕ ಸ್ಥಳಗಳಲ್ಲಿ ನಿಂತು ಮೂಗಿನಿಂದ ಕೆದಕಿ ತೆಗೆದ ಮೇಲೆ ಎಷ್ಟು ಬಂತು ಅಂತಾ ಬೇರೇ ಬೆರಳನ್ನು ಕೂಲಂಕೂಷವಾಗಿ ಅನಲೈಸ್ ಮಾಡಿ, ಅದನ್ನ ಪಕ್ಕದಲ್ಲಿ ಇರೋ ಸಿಮೆಂಟು ಗೋಡೆಗೋ, ಸ್ಟ್ಯಾಂಡಿಗೋ, ಪಕ್ಕದಲ್ಲಿ ನಿಂತ ಗಾಡಿಗೆ ಒರೆಸುತ್ತಾರೆ. ಮೋಸ್ಟ್ಲಿ ಇದು ಅವರು ಸಿಗ್ನೇಚರ್ ಮಾಡುವ ರೀತಿ ಅನ್ಸುತ್ತೆ.

೨. ಪ್ರಾಣಿ ಹಿಂಸೆ - ಹ್ಹಿಹ್ಹಿಹ್ಹಿ... ಇದರ ಬಗ್ಗೆ ನಾನು ಹೇಳದೇ ಇರೋದೇ ವಾಸಿ ಅನ್ಸುತ್ತೆ. ಆದ್ರೂ ಹೇಳಲೇ ಬೇಕು. ಒಂದು ಕೈ ತಲೆ ಮೇಲೆ, ಇನ್ನೊಂದು ಕೈ ಯಾವಾಗ್ಲೂ ಇನ್ನೊಂದು ಜಾಗದಲ್ಲಿ ಇಟ್ಟುಕೊಂಡು ನಿರಂತರವಾಗಿ ಪ್ರಾಣಿ ಹಿಂಸೆ ಮಾಡ್ತಾನೇ ಇರ್ತಾರೆ. ಇದು ಜಾಸ್ತಿಯಾಗಿ ನಡೆಯುವ ಸ್ಥಳವೆಂದರೆ ಬಸ್ ನಿಲ್ದಾಣ, ಟೀ ಸ್ಟಾಲು, ಒಂದೇ ಜಾಗದಲ್ಲಿ ನಿಂತು ಮೊಬೈಲಲ್ಲಿ ಮಾತಾಡುವಾಗ, ಯಾರಿಗಾದ್ರೂ ಕಾಯುವಾಗ ಇತ್ಯಾದಿ ಇತ್ಯಾದಿ. ಮಠ ಚಿತ್ರದಲ್ಲಿ ಜಗ್ಗೇಶು, ಮಠದ ಮುಂದೆ ಕೂರುವ ಭಿಕ್ಷುಕನಿಗೆ(ಪ್ರಣವ ಮೂರ್ತಿ) ಹೇಳೋ ಡೈಲಾಗು "ಸ್ವಾಮಿ, ಸ್ವಲ್ಪ ನಿಧಾನವಾಗಿ ಕೆರ್ಕೊಳಿ, ಪಾರ್ಟ್ಸು ಕೈಗೆ ಬಂದ್ಬಿಟ್ಟಾವು".

೩. ಘಂಟಾಘೋಷವಾಗಿ ಹೊಯ್ಕೊಳೋದು - ಅಹ್ಹಾ ಸ್ವಾಮಿ.. ಇದಪ್ಪಾ ಮಹಾನ್ ಖರಾಬ್ ಅಭ್ಯಾಸ ಅಂದ್ರೆ. ಯಾರು ಕೇಳಲಿ, ಬಿಡಲಿ, ಎಲ್ರಿಗೂ ಎನೂ, ಎಲ್ಲಾ ಕಡೆಯೂ ತಮ್ಮದೇ ಮಾತು ಎಕೋ ಹೊಡೀತ ಇರ್ಬೇಕು ಅನ್ನೋ ರೀತಿ ಮಾತಾಡ್ತ ಇರ್ತಾರೆ. ಇವಾಗ ಮೊಬೈಲು ಬಂದ ಮೇಲಂತೂ ಇನ್ನೂ ಜಾಸ್ತಿ ಆಗಿದೆ ಈ ಹಾವಳಿ. ಕಿವಿಗೆ ಮೊಬೈಲ್ ಸಿಕ್ಕಿಸ್ಕೊಂಡು, ಆಕಾಶ ನೋಡ್ತಾ ಮಾತಾಡೋ...ಕ್ಷಮಿಸಿ, ಕಿರುಚಾಡೋದು ಇದ್ಯಲ್ಲಾ... ಅಬ್ಬಬ್ಬಾ, ಮೈ ಕೈ ಪರಚಿಕೊಳ್ಳೋ ಹಾಗೆ ಆಗುತ್ತೆ.

೪. ಕಂಡ ಕಂಡ ಕಡೆ ಕ್ಯಾಕರಿಸಿ ಉಗಿಯೋದು. ಇಂಥಾ ದರಿದ್ರ ಮುಂಡೇಮಕ್ಳು ಬಿ.ಎಂ.ಟಿ.ಸಿ ಬಸ್ಸುಗಳಲ್ಲಿ ಪ್ರಯಾಣ ಮಾಡುವಾಗಂತೂ ಸಿಕ್ಕಾಪಟ್ಟೆ ಡೇಂಜರಸ್. ನಾನು ಬೈಕಿನಲ್ಲಿ ಆಫೀಸಿಗೆ ಹೋಗುವಾಗ ಎಷ್ಟೋ ಬಾರಿ ಬಸ್ಸಿನ ಕಿಟಕಿಯಿಂದ ಫೈರ್ ಆಗೋ ಮಿಸೈಲಿನಿಂದ ತಪ್ಪಿಸಿಕೊಂಡಿರುವೆ. ಒಮ್ಮೆ ಅಂತೂ ನನ್ನ ಬೈಕಿನ ಮುಂದಿನ ಮಡ್ ಗಾರ್ಡಿನ ಮೇಲೆ ಒಬ್ಬಾತ ಉಗಿದ. ತಕ್ಷಣ ಬಸ್ಸನ್ನು ನಿಲ್ಸಿ, ಆ ನನ್ ಮಗನ್ ಕಪಾಲಕ್ಕೆ ಇಕ್ಕಿ ನಡೆದೆ. ಇನ್ನೂ ಹೊಲ್ಸು ಅಂದ್ರೆ, ಆಟೋನಲ್ಲಿ ಕೂತಿರುವ ಪ್ರಯಾಣಿಕರು, ದ್ವಿಚಕ್ರ ಸವಾರರು, ಕಾರಿನಲ್ಲಿ ಹೋಗೋರು, ಲಾರಿ ಎಲ್ಲಾ.. ರೀತಿಯ ವಾಹನಗಳಿಂದ ಕೂಡಾ ಈ ರೀತಿಯಾದ ಬಾಂಬುಗಳು, ಮಿಸೈಲುಗಳು ಫೈರ್ ಆಗೋ ಚಾನ್ಸುಗಳು ಇರ್ತಾವೆ. ಹುಶಾರಾಗಿ ಓಡಿಸಿ.

೫. ಕಾಲು ಕುಣಿಸೋದು - ಎಲ್ಲೇ ಇರಲಿ, ಯಾರ ಮುಂದೆ ಇರಲಿ, ಕಾಲನ್ನು ಕುಣಿಸುತ್ತಾ ಇರೋದು. ಏನೋ, ಹಾಡು ಕೇಳುವಾಗ, ಡ್ಯಾನ್ಸ್ ನೋಡುವಾಗ ಕಾಲು ಕುಣಿಸೋದು ಸಹಜ. ಅದನ್ನು ಬಿಟ್ಟು, ಕುಳಿತಿರುವ ಎಲ್ಲಾ ವೇಳೆಯಲ್ಲೂ ಕಾಲನ್ನು ಅಡ್ಡಡ್ಡವಾಗಿ, ಮೇಲೆ ಕೆಳಗೆ ಕುಣಿಸೋದು ಯಾವ ತೆರನಾದ ಡೀಸೆನ್ಸಿ ? ನಂಗಂತೂ ಪರ್ಸನಲಿ ಸಿಕ್ಕಾಪಟ್ಟೆ ಮೈ ಉರಿಯುತ್ತೆ ಇದನ್ನು ಕಂಡಾಗ. ದನಗಳ ಗೊರಸಿನಲ್ಲಿ ಹುಳುಗಳು ಮುತ್ತಿಕೊಂಡಾಗ , ಈ ರೀತಿಯಾಗಿ ಕಾಲು ಆಡಿಸುತ್ತಾ ಇರುತ್ತವೆ.

೬. ಸಿಗರೇಟು ಸೇದಿರಪ್ಪಾ, ಸೇದಿ. ಆದ್ರೆ, ನೀವು ಕಾಸು ಕೊಟ್ಟು ಕೊಂಡಿರುವ ಸಿಗರೇಟಿನ ಹೊಗೆಯನ್ನು ಎಲ್ಲರಿಗೇಕೆ ಕೊಡ್ತೀರಾ ? ಸ್ಮೋಕ್ ಮಾಡಬೇಕಾದರೆ, ನಿಮ್ಮ ಸಿಗರೇಟಿನ ಹೊಗೆಯಿಂದ ಅಕ್ಕಪಕ್ಕದವರಿಗೆ ಹಿಂಸೆಯಾಗದ ಹಾಗೆ ನೋಡಿ. ಇನ್ನು ಕೆಲವರು ಇದಾರಪ್ಪ. ರಸ್ತೆಯಲ್ಲಿ, ಫುಟ್ಪಾತಿನಲ್ಲಿ ಬಿರ ಬಿರನೆ ನಡೆಯುತ್ತಾ, ಬಾಯಿಂದ ಹೊಗೆಯನ್ನು ಎಲ್ಲರ ಮುಖಕ್ಕೆ ರಾಚುತ್ತಾ ಇರ್ತಾರೆ.

ನಾವು ಮಾಡುವುದನ್ನೇ ಮಕ್ಕಳೂ ಅನುಸರಿಸುತ್ತವೆ ಹಾಗು ಅನುಕರಣೆ ಮಾಡುತ್ತಾರೆ. ಆದ್ದರಿಂದ ಜನ ಈ ರೀತಿಯ ನಡೆಯುವ ಮುನ್ನ, ಯೋಚನೆ ಮಾಡ್ಲಿ. ಈ ರೀತಿಯ ಅಭ್ಯಾಸಗಳು ಹೇಗೆ ಬೇರೆಯವರಿಗೆ ಮುಜುಗರ, ತೊಂದ್ರೆ, ಇಕ್ಕಟ್ಟು ಉಂಟು ಮಾಡುತ್ತದೆ ಅಂತಾ ಕೂಡ ಯೋಚಿಸಬೇಕು. ಸ್ವಲ್ಪ ಕಾಮನ್ ಸೆನ್ಸ್ ರೂಢಿಸಿಕೊಳ್ಳಿ. ನಿಮಗೂ ಒಳ್ಳೇದು, ನಮಗೂ ಒಳ್ಳೇದು.

ಸಧ್ಯಕ್ಕೆ ಇಷ್ಟೇ ಜ್ನಾಪಕಕ್ಕೆ ಬಂದಿದ್ದು. ಇನ್ನೂ ಕೆಲವು ಸಿಕ್ಕಿದ ಮೇಲೆ ಸೇರಿಸ್ತೀನಿ. ನಿಮಗೆ ಜ್ನಾಪಕಕ್ಕೆ ಬಂದ್ರೆ ಕಮೆಂಟಲ್ಲಿ ಹಾಕಿ. ನಾನು ಸೇರಿಸ್ತೀನಿ.
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

3 comments:

ಅಂತರ್ವಾಣಿ said...

ನಿಜಕ್ಕು ದರಿದ್ರವಾದ ಅಭ್ಯಾಸಗಳು...ಇವೆಲ್ಲಾ.

ಒಂದು ನನಗೆ ಹಿಡಿಸದ ವಿಷಯವೆಂದರೆ ನೀವು ಜನರನ್ನು ಜರಿಯಲು ಬಳಸಿದ ಪದಗಳು.(ಕೇವಲ ನನ್ನ ಅಭಿಪ್ರಾಯ)

ವಿ.ರಾ.ಹೆ. said...

ದರಿದ್ರ ಜನಗಳ ದರಿದ್ರ ಅಭ್ಯಾಸಗಳನ್ನು ಸರಿಯಾಗೇ ಲಿಸ್ಟ್ ಮಾಡಿದೀರ. ಅಂತವರನ್ನ ಯಾವ ಮಾತುಗಳಿಂದ ಬೈದ್ರೂ ತಪ್ಪಲ್ಲ ಬಿಡಿ. ಪಬ್ಲಿಕ್ನಲ್ಲಿ ಬೇರೆಯವರಿಗೆ ತೊಂದರೆಯಾಗೋ ಹಾಗೆ ಇರೋ ಬುದ್ಧಿ ಯಾವಾಗ ಬರತ್ತೋ ಭಾರತೀಯರಿಗೆ ಗೊತ್ತಿಲ್ಲ ! :(

Anonymous said...

ಪಾಪ ಅವರರವರ ತೊಂದ್ರೆ ಅವರವರಿಗೆ. ಹೊರಗಡೆ ಸಿಕ್ಕಾಪಟ್ಟೆ ಬಿಸಿಲು, ಟ್ರಾಫಿಕ್ ಹೊಗೆ, ಧೂಳು, ಬೆವರು. ಸ್ನಾನ ಮಾಡಿ ದಿನಗಳಾಗಿರುತ್ತೆ. (ನೀರಿದ್ರೆ ಅಲ್ವಾ ಸ್ನಾನದ ಮಾತು). ಕೆರಕೊಳ್ಳಬೇಕು ಅಂತ ಅನಿಸಿದರೆ ಅದು ಅವರ ತಪ್ಪಲ್ಲ ಬಿಡಿ! ಅನುಕೂಲ ಇಲ್ಲದಿರೋರ ಬಗ್ಗೆ ಸ್ವಲ್ಪ ಕನಿಕರ ಇರಲಿ. ಎಲ್ಲಾ ಅನುಕೂಲ ಇದ್ದು ದುರಭ್ಯಾಸಕ್ಕೆ ಬಿದ್ದೋರ, ಇತರರ ಬಗ್ಗೆ ಕಾಳಜಿ ಇಲ್ಲದೆ ಮೊಬೈಲಲ್ಲಿ ಜೋರಾಗಿ ಕಿರುಚಾಡುವ ಜನರ ಬಗ್ಗೆ ನಿಮ್ಮ ಹಾಗೆ ನನಗೂ ಸಿಟ್ಟು ಇದೆ.

-ಗುರು