Friday, August 3, 2007

ಇಂಥವರಿಗೆ ಏನಂತೀರಿ ?

"ABCD" ಚಿತ್ರವು ಶತದಿನೋತ್ಸವ ಆಚರಿಸಲೆಂದು ಹಾರೈಸುವ -

"ಮೇಘಾಸ್ಟಾರ್ ಅಭಿಮಾನಿಗಳ ಸಂಘ" (ಅದೇನು ಮೆಗಾಸ್ಟಾರೋ, ಅಥವಾ ಮೇಘಾಸ್ಟಾರೋ ?? ಅವನೇನು ಮೋಡದ ಸ್ಟಾರಾ ?)
ಯಾವ ಚಿತ್ರಮಂದಿರವಾಗಲೀ, ಟ್ರಾಫಿಕ್ ಸಿಗ್ನಲ್ ಆಗಲಿ ಈ ಥರ ಕಟೌಟ್ ಗಳು ಇವಾಗ ಸರ್ವೇ ಸಾಮಾನ್ಯ.

ಜನರಲ್ಲಿ ಇತ್ತೀಚಿಗೆ ಈ ಪೋಸ್ಟರ್ ತೆವಲು ಸಖತ್ತಾಗಿ ತಲೆಗೆ ಹತ್ತಿದೆ. ಯಕ್ಕಾಚಿಕ್ಕಿ ಚೀಪ್ ಆಗಿ ಪ್ರಿಂಟ್ ಮಾಡಿ ಕೊಡುವ ಪ್ರಿಂಟರ್ ಗಳು, ಸದ್ದಿಲ್ಲದೆ ರಾತ್ರೋರಾತ್ರಿ ಗೋಡೆ, ಲೈಟ್ ಕಂಬ ಏರುವ ಪೋಸ್ಟರ್ ಗಳು ನಿಜವಾದ ಅರ್ಥದಲ್ಲಿ ಮೊದಲೇ ಅತಿಯಾದ ಟ್ರಾಫಿಕ್, ನಾಯಿಕೊಡೆಯಂತೆ ತಲೆ ಎತ್ತಿರುವ ಅಪಾರ್ಟ್ ಮೆಂಟ್, ಬಿಲ್ಡಿಂಗ್ ಗಳು, ಸ್ಲಮ್ ಗಳಿಂದ ಅಂದ ಕಳೆದುಕೊಳ್ತಾ ಇರೋ ಬೆಂಗಳೂರಿಗೆ ಇನ್ನೂ ಸಾಥ್ ಕೊಡ್ತಾ ಇವೆ.

"ನಮ್ಮ ನೆಚ್ಚಿನ ನಾಯಕ , ದೀನ ಬಂಧು, ಯುವಕರ ಆಶಾಕಿರಣ ಶ್ರೀ.XYZ ಇನ್ನೂ ನೂರು ವರ್ಷ ಬಾಳಲಿ ಎಂದು ಹಾರೈಸುವ" -
ABC, 123 ವಾರ್ಡ್, ಬೆಂಗಳೂರು.

ಇವನು ಈ ಪೋಸ್ಟರ್ ಹಾಕಿಸದೆ ಇದ್ದಿದ್ರೆ ಅವನ "ಹಚ್ಚುಮೆಚ್ಹಿನ ನಾಯಕ" ಏನು ಅವತ್ತೇ ನೆಗೆದು ಬೀಳ್ತಿದ್ನಾ ??

ಇನ್ನೊಂದು ಪೋಸ್ಟರ್ ನಲ್ಲಿ "ನಮ್ಮ ನೆಚ್ಚಿನ ನೇತಾರ" ಅನ್ನುವ ಬದಲಾಗಿ "ನಮ್ಮ ಅಚ್ಚುಮೆಚ್ಚಿನ ನೇಕಾರ" ಅಂತ ಹಾಕಿದ್ರು..

ಇನ್ನು ಕೆಲವು ಜನರು ಈ ಪೋಸ್ಟರ್ ಗೆ ಪೋಸ್ ಕೂಡಲೆಂದೇ ಹುಟ್ಟಿರ್ತಾರೋ ಏನೋ...ಒಂದೊಂದು ಮೂತಿಗಳೂ ಅಬ್ಬಬ್ಬಾ...ಅವ್ರಿಗೆ ಏನು ಅಷ್ಟೊಂದು ಪ್ರಚಾರಗ ತೆವಲಾ ??
ಇನ್ನು ಮರಿ ಪುಢಾರಿಗಳು....ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವ SO CALLED ಯುವ ನೇತಾರರು.. ಅವರು ಹಾಕಿರುವ ಬಟ್ಟೆ, ಕೈಗೆ, ಕತ್ತಿಗೆ, ಬೆರಳುಗಳಿಗೆ.. ಅಬ್ಬಬ್ಬಾ... ಕನಿಷ್ಟಪಕ್ಷ ಅರ್ಧ ಕಿಲೋ ಚಿನ್ನ ಇರುತ್ತೆ..ಅದರ ಮೇಲೆ ಅಂಗಿಯ 4 ಗುಂಡಿ ಬಿಚ್ಹಿ ಅವರ ಕತ್ತಿನಲ್ಲಿ ಇರುವ ಹೆಬ್ಬೆರಳು ಗಾತ್ರದ ಚೈನಿನ ಪ್ರದರ್ಶನ..ಅವರೇನು ತಮ್ಮ ಬಳಿ ಇರುವ ಚಿನ್ನದ ಪ್ರದರ್ಶನಕ್ಕೆ ಈ ಥರ ಪೋಸ್ಟರ್ ಹಾಕಿಸ್ತಾರಾ ಎನೋ ಅಂತ ಅನುಮಾನ ಬರುತ್ತೆ.

ಇನ್ನು ಕೆಲವರು ಈ ತೀಟೆಯ ಅತಿರೇಕಕ್ಕೆ ಹೋಗಿದಾರೆ.. ಮನೆ ಮಟ್ಟಿಗೆ ನಡೆಯುವ ಮಗುವಿನ ನಾಮಕರಣ, ಹುಟ್ಟಿದಹಬ್ಬ, ಚೌಲ, ಲಗ್ನಪತ್ರಿಕೆ, ಮದುವೆ ಇತ್ಯಾದಿ ಸಮಾರಂಭಗಳಿಗೆ ಅವರ ಬೀದಿ ಮತ್ತು ಮೇಯ್ನ್ ರೋಡಿನಲ್ಲಿ ಭರ್ಜರಿಯಾಗಿ ಪೋಸ್ಟರ್ ಹಾಕ್ತಾರೆ..
ಈಜನರ ತೆವಲು ಇನ್ನೂ ಎಷ್ಟು ಅತಿರೇಕಕ್ಕೆ ಹೋಗುತ್ತೋ, ಕಾದು ನೋಡಬೇಕು.

ಬೆಂ ನ ಪ್ರಾ (ಬೆಂಗಳೂರು ನಗರ ಪ್ರಾಧಿಕಾರ) ಈ ನಿಟ್ಟಿನಲ್ಲಿ ಬಿಗಿಯಾದ ಕಾನೂನು ಆದೇಶ ತರಬೇಕು.
ಮು.ಮಂ. ಕುಮಾರಣ್ಣ ಕೂಡಾ ಹೆಚ್ಹುತ್ತಿರುವ ಹಾಗು ಹಬ್ಬುತ್ತಿರುವ ಪೋಸ್ಟರ್ ಹಾವಳಿ ಕುರಿತು ಒಮ್ಮೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು, ಹಾಗೆಯೇ ಸದನದಲ್ಲಿ ಈ ಕುರಿತು ಸಿಡಿಮಿಡಿಗುಟ್ಟಿದ್ದರು. ಪ್ರಾಧಿಕಾರಕ್ಕೂ ಇದರ ಬಗ್ಗೆ ತೀವ್ರ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದ್ದರು..
ಅಂದ್ರೂ ಕೂಡಾ ಏನೂ ಉಪಯೋಗವಾಗಲಿಲ್ಲ..

ಇನ್ನೂ ಬರೆಯುವುದಕ್ಕೆ ಬೇಕಾದಷ್ಟಿದೆ.. ಅದನ್ನು ಮುಂದಿನ ಬಾರಿ ಫೋಟೋ ಸಮೇತ ಹಾಕ್ತೀನಿ..

ವಿ.ಸೂ : ನಿಮ್ಮ ಅನಿಸಿಕೆಗಳು ಬಹಳ ಅವಶ್ಯಕ.

-------------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

1 comment:

ವಿ.ರಾ.ಹೆ. said...

ಗುರು, ನೀನ್ ಹೇಳೋದು ಸರಿಗೈತೆ.

ಈಗಂತೂ ವಿನೈಲ್ ಪೋಸ್ಟರ್ ಗಳು ತರಕಾರಿ ರೇಟಿಗೆ ಸಿಗಂಗಾಗ್ಬಿಟ್ಟು ಭಾರಿ ತೊಂದರೆ ಆಗೋಗಿದೆ. ಬೆಂಗಳೂರಲ್ಲಂತೂ ಇದು ದೊಡ್ಡ ರೋಗ. ಕಬಡ್ಡಿ ಪಂದ್ಯಾವಳಿ ಯಿಂದ ಹಿಡಿದು ಅಣ್ಣಮ್ಮನ ಜಾತ್ರೆ, ಕರಗ ತನಕ ಎಲ್ಲಾರೂ ಪೋಸ್ಟರ್ ಹಾಕಿಸ್ಕಳೋರೆ ಆಗಿದಾರೆ.

ಮೊನ್ನೆ ಯಾವುದೋ ಸ್ಲಮ್ ಹತ್ರ ನೋಡಿದೆ ಗುರು. ಯಾವನೋ ಒಬ್ಬ ಕೈಯಲ್ಲಿ ಗನ್ ಹಿಡ್ಕಂಡು ರಜನೀಕಾಂತ್ ತರ ಪೋಸ್ಟರ್ ಹಾಕಿಸ್ಕಂಡವ್ನೆ ! ಪೋಲಿಸ್ನವ್ರು ಅದೆಲ್ಲಿ ತವಡು ಕುಟ್ತವ್ರೋ ಏನೋ.! ಅವ್ರಾದ್ರೂ ಏನ್ ಮಾಡ್ತಾರೆ ಪಾಪ, ಬಿಗ್ ಬಾಸ್ ರಾಜಕಾರಣಿಗಳೇ ಪೋಸ್ಟರ್ ಗಳಲ್ಲಿ ಮಿಂಚ್ತಾ ಇರ್ಬೇಕಾದ್ರೆ ಅಲ್ವಾ.

ಸರ್ಕಾರ ಕೂಡ್ಲೆ ಎಚ್ಚೆತ್ತು ಜಾಹೀರಾತಿಗೆ/ ಪೋಸ್ಟರ್, ಪ್ರಚಾರಗಳಿಗೆ ಒಂದು ಸಂಹಿತೆ ಜಾರಿಗೆ ತರಬೇಕು ಇಲ್ಲಾಂದ್ರೆ ಇನ್ನು ಏನೇನು ನೋಡ್ಬೇಕಾಗತ್ತೋ ಏನೋ ಈ ದೃಶ್ಯಮಾಲಿನ್ಯದಲ್ಲಿ !

ಪೂರಕ ಓದಿಗೆ
http://vikasavada.blogspot.com/2007/07/blog-post_27.html