Monday, March 15, 2010

ಭದ್ರತೆ... ಏನು ನಮ್ಮ ಸಿದ್ಧತೆ?

ಇತ್ತೀಚಿಗೆ ಒಂದೇ ಪ್ರಶ್ನೆಯನ್ನು ನಾನು ನನ್ನಲ್ಲೇ ಪದೇ ಪದೇ ಕೇಳಿಕೊಳ್ಳುತ್ತೇನೆ....."ನಾವು ಸುರಕ್ಷಿತವಾಗಿ ಇದೀವಾ?" ಎಂದು. ಈಗ್ಗೆ ಸುಮಾರು ಒಂದು ದಶಕದ ಈಚೆಗೆ ಭದ್ರತೆ, ಸುರಕ್ಷತೆ ಎನ್ನುವುದು ಜೀವನಕ್ಕೆ ಊಟ, ವಸತಿ, ಬಟ್ಟೆಯಷ್ಟೇ ಮುಖ್ಯವಾಗಿದೆ. ಈ ಮುಂಚೆ ಭಯ ಆತಂಕದ ಕಾರಣ ಇದ್ದದ್ದು ಕಳ್ಳರು, ದರೋಡೆಕೋರರು, ಅತ್ಯಾಚಾರಿಗಳಿಂದ. ಆದರೆ ಈಗ ಜಾಗತಿಕ ಹಾಗು ಆಂತರಿಕ ಭಯೋತ್ಪಾದನೆಯಿಂದ ಹೆಚ್ಚುತ್ತಿರುವ ಆತಂಕ, ಸಂಶಯ, ಅಸುರಕ್ಷತೆಯ ಭಾವನೆ, ಅಶಾಂತಿಯ ಕಾರಣದಿಂದಾಗಿ ನಾವು ಮುಂಚಿನಕ್ಕಿಂತಾ ಹೆಚ್ಚು ಜಾಗರೂಕರಾಗಿದ್ದೀವಿ ಹಾಗು ಭದ್ರತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದೀವಿ ಹಾಗು ಚಿಂತಿತರಾಗಿದ್ದೀವಿ.

ಪ್ರತೀ ಬಾರಿ ನಾನು ಯಾವುದೇ ನೂರಾರು ಸಾವಿರಾರು ಜನರು ಸೇರುವ ಜಾಗಕ್ಕೆ ಹೋದಾಗ "ಭದ್ರತಾ ತಪಾಸಣೆ" ಎಂಬ ಒಂದು ಹಾಸ್ಯಾಸ್ಪದ ಘಟನೆಗೆ ಒಳಪಡುತ್ತೇನೆ ಹಾಗು ಸಾಕ್ಷಿಯಾಗುತ್ತೇನೆ. ಈ ಭದ್ರತೆ ಎನ್ನುವ ಪದಕ್ಕೆ ನಮ್ಮಲ್ಲಿ ಇನ್ನೂ ಸರಿಯಾದ ವ್ಯಾಖ್ಯಾನ ಹಾಗು ಗಾಂಭೀರ್ಯ ಸಿಕ್ಕಿಲ್ಲ್ಲ.

ನಿನ್ನೆ ಹದಿನಾಲ್ಕರ ಭಾನುವಾರ ನನ್ನಾಕೆಯ ಜೊತೆ ಜಯನಗರದ ಸ್ವಾಗತ್ ಗರುಡ ಮಾಲ್-ನ ಸಿನೆಮಾ ಮಂದಿರದಲ್ಲಿ "ಆಪ್ತರಕ್ಷಕ" ನೋಡಲು ಹೋಗಿದ್ದೆ. ಅಲ್ಲಿ ಮೂರು ಕಡೆ ತಪಾಸಣೆ. ಮೊದಲು ಲೋಹ ಶೋಧಕ ಬಾಗಿಲಿನ ಮೂಲಕ ಒಳಗೆ ಪ್ರವೇಶ, ನಂತರ ಅಲ್ಲೇ ಮತ್ತೊಬ್ಬ ಭದ್ರತಾ ಸಿಬ್ಬಂದಿಯಿಂದ ತಪಾಸಣೆ. ನಾನು ಎಲ್ಲಿ ಹೋದರೂ ಬೆನ್ನಿಗೊಂದು ಚೀಲ ನೇತುಹಾಕಿಕೊಂಡು ಹೋಗುವ ಅಭ್ಯಾಸ. ಆ ಸಿಬ್ಬಂದಿ ಆ ಬ್ಯಾಗನ್ನು ತೆರೆಸಿ ಚೆಕ್ ಮಾಡಿದ. ನಂತರ ಚಿತ್ರಮಂದಿರದ ಒಳಗೆ ಹೋಗುವುದಕ್ಕೆ ಅಲ್ಲೊಂದು ಬಾರಿ ತಪಾಸಣೆ. ಮೊದಲು ಸಿಬ್ಬಂದಿಯಿಂದ ನಮ್ಮ ದೇಹವನ್ನು ಮುಟ್ಟಿ ತಪಾಸಣೆ, ನಂತರ ಬ್ಯಾಗನ್ನು ತೆರೆಸಿ ಮಗದೊಮ್ಮೆ ತಪಾಸಣೆ. ತಡೆಯಲಾರದೆ ಕೇಳಿದೆ "ಅಲ್ಲಾ ಕಣ್ರೀ, ನೀವೇನೋ ಬ್ಯಾಗ್ ತೆರೆಸಿ ಚೆಕ್ ಮಾಡ್ತೀರಾ; ಒಳಗೆ ಬಾಂಬು, ಗನ್ ಇದ್ರೆ ಏನ್ ಮಾಡ್ತೀರಾ? ನಾನೇ ಈಗ ಜೇಬಿನಿಂದ ಗನ್ ತೆಗೆದರೆ ಹೆಂಗೆ?" ಎಂದು. ಅಒದೈದು ಕ್ಷಣ ತಬ್ಬಿಬ್ಬಾದ ಆತ ಒಂದು ದೇಶಾವರಿ ನಗೆ ನಕ್ಕಿ "ಕಂಪ್ಲೇಂಟ್ ಕೊಡ್ತೀವಿ ಸಾರ್, ಓಡಲೇ ಬೇಕಾಗುತ್ತೆ ಸಾರ್.. ಇನ್ನೇನ್ ಮಾಡೋಕಾಗುತ್ತೆ?" ಎಂದ.

ನಾನು ಮುಂಚೆ ಹೇಳಿದ ಹಾಗೆ ನಮ್ಮಲ್ಲಿ ಭದ್ರತೆಯ ವ್ಯಾಖ್ಯಾನ ತಪ್ಪಾಗಿದೆ. ಸಾವಿರ ಜನ ಇರಲಿ, ಹೊರಗೆ ಹತ್ತು ಜನ ಒಂದು ದೊಣ್ಣೆ ಹಿಡಿದು ನಿಂತಿದ್ದರೆ ಆ ಜಾಗಕ್ಕೆ ಭದ್ರತೆ ಕೊಡಲಾಗಿದೆ ಎಂದರ್ಥ. ಇದರ ಪ್ರತ್ಯಕ್ಷ ದರ್ಶನವಾಗಬೇಕು ಎಂದರೆ ಯಾವುದಾದರೂ ಮಾಲ್-ಗೆ ಹೋಗಿ. ಪ್ರವೇಶದಲ್ಲೇ ಲೋಹಶೋಧಕ ಬಾಗಿಲು; ದಾಟಿದ ಕೂಡಲೇ ಸಿಬ್ಬಂದಿಯ ಕೈಲಿ ಒಂದು ಲೋಹಶೋಧಕ ಯಂತ್ರ; ಚೀಲ ಇದ್ದರೆ ಅದನ್ನು ತೆರೆಸಿ ತಪಾಸಣೆ. ಇವರಿಗೆ ಅಸಲು ಬಾಂಬ್ ಹೇಗಿರುತ್ತದೆ ಎನ್ನುವ ಕಲ್ಪನೆ ಇರುತ್ತದೆಯೇ ? ಸಿನೆಮಾದಲ್ಲಿ ತೋರಿಸಿದ ಹಾಗೆ ಒಂದು ಡಬ್ಬ, ಅದಕ್ಕೆ ಹತ್ತಾರು ವೈರ್-ಗಳು, ಮಿಣುಗುತ್ತಾ ಇರೋ LED ದೀಪಗಳು ಹಾಗು ಒಂದು ಟೈಮರ್.. ಹೀಗಾ? ಅಪಾಯ ಉಂಟುಮಾಡುವ ವಸ್ತು ಹೇಗೆ ಇರುವುದು ಎನ್ನುವ ಕಲ್ಪನೆಯೇ ಇಲ್ಲದೆ ಇವರು ಚೀಲದ ಒಳಗೆ ಏನನ್ನು ಹುಡುಕುತ್ತಾರೆ ? ಬೇರೆ ಪಶ್ಚಾತ್ಯ ದೇಶಗಳ ಹಾಗೆ ನಮ್ಮಲ್ಲಿ ಇನ್ನೂ ಆ ಲೆವೆಲ್ಲಿಗೆ ಗನ್ ಸಂಸ್ಕೃತಿ ಇಲ್ಲ. ಹಾಗೆ ಇದ್ದಿದ್ದಲ್ಲಿ, ಒಬ್ಬಾತ ತನ್ನ ಜೇಬಿನಿಂದ ಬಂದೂಕನ್ನು ತೆಗೆದ ಪಕ್ಷದಲ್ಲಿ, ಈ ಭದ್ರತಾ ಸಿಬ್ಬಂದಿ ಏನು ಮಾಡಬಲ್ಲರು ? ಇನ್ನು ನಮ್ಮ ಇದೇ ಮಾಲ್-ಗಳಲ್ಲಿನ ವಾಹನ ನಿಲುಗಡೆ. ಇವು ಇರುವುದು ನೆಲಮಾಳಿಗೆಯಲ್ಲಿ. ಅಲ್ಲಿ ಒಳಗೆ ಬರುವ ವಾಹನಕ್ಕೆ ಯಾವುದೇ ರೀತಿಯ ತಪಾಸಣೆ ??? ಉಹೂಂ.. ಶೂನ್ಯ. ಅವುಗಳು ಒಳಗೆ ಬಂದ ಕೂಡಲೇ ಚೀಟಿ ಹರಿದು ಕೊಡ್ತಾರೆ ವಿನಃ ಬೇರಾವುದಕ್ಕೂ ಅಲ್ಲ.

ನಮ್ಮಲ್ಲಿ ಇರುವ ಭದ್ರತಾ ಸಿಬ್ಬಂದಿ ಎಷ್ಟರ ಮಟ್ಟಿಗೆ ಈ ರೀತಿಯಾದ ಸಂದರ್ಭಗಳನ್ನು ಎದುರಿಸಲು ಯೋಗ್ಯರಾಗಿದ್ದಾರೆ? ಮೇಲೆ ಹೇಳಿದ ಘಟನೆ ನಡೆದ ಪಕ್ಷದಲ್ಲಿ, ಅದಕ್ಕೆ ಕಾರಣರಾದವರನ್ನು ದೈಹಿಕವಾಗಿ ಎದುರಿಸುವ ಬಲ ಹಾಗು ಮಾನಸಿಕ ಸ್ಥೈರ್ಯ ಹೊಂದಿದ್ದಾರೆ ? ತುರ್ತು ಪರಿಸ್ಥಿತಿಗಳಲ್ಲಿ ಅವುಗಳನ್ನು ನಿಭಾಯಿಸುವ ತರಬೇತಿ ಎಷ್ಟು ಮಂದಿ ಉಳ್ಳವರಾಗಿದ್ದಾರೆ? ಅಗ್ನಿಶಾಮಕ ಉಪಕರಣಗಳನ್ನು / ಪದ್ಧತಿ ಹಾಗು ಪ್ರಥಮ ಚಿಕಿತ್ಸೆ ಬಗ್ಗೆ ಎಷ್ಟು ಮಂದಿಗೆ ಅರಿವಿದೆ? ಸಾಕಷ್ಟು ಬಾರಿ ಕಂಡ ಹಾಗೆ ಕಾಟಾಚಾರಕ್ಕೆ, ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಈ ಸಿಬ್ಬಂದಿಯನ್ನು ಕೆಲಸಕ್ಕೆ ಸೇರಿಸಿಕೊಂಡಿರುತ್ತಾರೆ. ಇವರುಗಳಿಗೆ ಒಂದು ಸಾಮಾನ್ಯ ಬೌದ್ಧಿಕ ಹಾಗು ವಿದ್ಯಾರ್ಹತೆ ಇರಬೇಕು. ಎಲ್ಲಕ್ಕಿಂತ ಮಿಗಿಲಾಗಿ, ಒಂದು ಕನಿಷ್ಟ ಮಟ್ಟದ ದೈಹಿಕ ಅರ್ಹತೆ ಇರಬೇಕು. ಬೆಂಗಳೂರಲ್ಲಿ ಇರುವ ಈ ಸಿಬ್ಬಂದಿಗಳ ಪೈಕಿ ಸುಮಾರು ಜನಕ್ಕೆ ಇವು ಇರುವುದಿಲ್ಲ. ಇನ್ನು ಬ್ಯಾಂಕುಗಳ ATM ಯಂತ್ರಗಳ ಭದ್ರತಾ ಸಿಬ್ಬಂದಿಗಳನ್ನು ನೋಡಿದರೆ ಅಯ್ಯೋ ಅನ್ನಿಸುತ್ತದೆ. ಈ ಗುಂಪಿನ ಸಿಬ್ಬಂದಿಗಳಲ್ಲಿ ಸುಮಾರು 60-65% ಐವತ್ತು ವರ್ಷಕ್ಕೆ ಮೇಲ್ಪಟ್ಟವರು. ಇಂಥವರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಸಮರ್ಥರಾಗಿರುವುದ್ದಿಲ್ಲಾ, ಇನ್ನು ಭದ್ರತೆಯ ಪ್ರಶ್ನೆ ಎಲ್ಲಿದೆ? ಕೆಲ ತಿಂಗಳ ಹಿಂದೆ ಬೆಂಗಳೂರಿನ RT ನಗರದ ಬ್ಯಾಂಕ್ ಒಂದರಲ್ಲಿ ಹೀಗೆ ಹೋಚುವ ಕಾರ್ಯದಲ್ಲಿ ಅಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ದಾರುಣವಾಗಿ ಹತ್ಯೆ ಮಾಡಲಾಗಿತ್ತು.

ನಾನು ಯೂರೋಪಿನಲ್ಲಿ ಸುಮಾರು ಆರು ದೇಶಗಳಿಗೆ ಸುತ್ತಿರುವೆ. ನಾನು ಪರದೇಶಿಯಾಗಿ ಆ ದೇಶದಲ್ಲಿ ಅನುಭವಿಸಿರುವ ಭದ್ರತೆಯನ್ನು, ನಮ್ಮ ದೇಶದಲ್ಲಿ ನಾನು ಅನುಭವಿಸಿಲ್ಲ. ಅಲ್ಲಿ ಯಾವುದೇ ಜಾಗಕ್ಕೆ ಹೋಗಲಿ, ಅಲ್ಲಿರುವ ಭದ್ರತಾ ಸಿಬ್ಬಂದಿಯನ್ನು, ಅವರ ಪರಿಕರಗಳನ್ನು ಕಂಡರೆ ಅವರು ಕೊಡುವ ಹಾಗು ಕೊಡಬಲ್ಲ ಭದ್ರತೆಯ ಭಾವನೆ ಉಂಟಾಗುತ್ತದೆ ಹಾಗು ತಂಟೆ ತಕರಾರು ಮಾಡುವವರೂ ಕೂಡಾ ನಾಲ್ಕು ಬಾರಿ ಯೋಚಿಸಬೇಕಾಗುತ್ತದೆ. ಆದರೆ ಇಲ್ಲಿ ಭದ್ರತೆ ಅನ್ನುವುದು ಸುಮ್ಮನೆ ಒಂದು ಕಣ್ಣೊರೆಸುವ ಕೆಲಸವಗಿದೆಯೇ ಹೊರತು ಬೇರೇನೂ ಅಲ್ಲ. ಏನಾಗುವುದೋ, ಆ ದೇವರೇ ಬಲ್ಲ. ಪದೇ ಪದೇ ಹೇಳುವ ಹಾಗೆ, ಅರಿವು ಮುಖ್ಯ.

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

13 comments:

shivu.k said...

ಶಂಕರ್,

ಭಧ್ರತೆ ಬಗ್ಗೆ ಒಂದು ಕಾಳಜಿಯುಕ್ತ ಲೇಖನವನ್ನು ಬರೆದಿದ್ದೀರಿ. ನಾನು ನಿನ್ನೆ ನನ್ನ ಶ್ರೀಮತಿ ಸಂಗಡ ನಮ್ಮ ಮನೆಗೆ ಹತ್ತಿರವಿರುವ ಹೊಸ ಮಂತ್ರಿ ಮಾಲ್‍ಗೆ ಹೋಗಿದ್ದೆ. ಅಲ್ಲಿಯೂ ಅಷ್ಟೇ ನೀವು ಹೇಳಿದಂತೆ ಭದ್ರತೆ ವಿಚಾರದಲ್ಲಿ ಸುಮ್ಮನೆ ತೇಪೆ ಸಾರಿಸಿದಂತೆ. ಈಗಾಗಲೇ ಅಲ್ಲಿಗೆ ಸಾವಿರಾರು ಜನರು ಹೋಗುತ್ತಿದ್ದಾರೆ. ಈ ವಿಚಾರದಲ್ಲಿ ನಮ್ಮ ವ್ಯವಸ್ಥೆ ಸರಿಯಾಗಿಲ್ಲವೆನ್ನುವ ನಿಮ್ಮ ಅಭಿಪ್ರಾಯವೆ ನನ್ನದು ಕೂಡ...

Subrahmanya said...

ತುಂಬಾ ಪ್ರಸ್ತುತ ಲೇಖನ. ಭದ್ರತಾ ತಪಾಸಣೆ ಅಥವಾ ರಕ್ಷಣೆ ನಮ್ಮಲ್ಲಿ ಕೇವಲ ತೋರಿಕೆಯಾಗಷ್ಟೇ ಉಳಿದಿದೆ. ರಂಗೋಲಿ ಕೆ ಳಗೆ ತೂರುವವರನ್ನು ಪತ್ತೆಹಚ್ಚವುದು ಈಗಿರುವ ವ್ಯವಸ್ಥೆಯಿಂದ ಸಾಧ್ಯವಿಲ್ಲವೆನಿಸುತ್ತದೆ...ಅದಕ್ಕೆ ಅಲ್ಲವೇ ನಮ್ಮಲ್ಲಿ ಬಾಂಬ್ ಬ್ಲಾಸ್ಟ್ ಗಳು ಆಗುತ್ತಲೇ ಇರುವುದು..( ಪಾಕಿಸ್ತಾನ ದಷ್ಟಿಲ್ಲ, ಆದರೂ ಅಭದ್ರತೆಯಂತೂ ಇದ್ದೇ ಇದೆ !!)

ವಿ.ರಾ.ಹೆ. said...

ಹೌದು. ಬಹಳ ಪ್ರಸ್ತುತ ವಿಚಾರ ಇದು. ಎಲ್ಲಾ ಕಡೆಯೂ ಸೆಕ್ಯುರಿಟಿ ಅಂತ ಒಂದು ಇದೆ ಎಂದು ತೋರಿಸಿಕೊಳ್ಳುವ ಸೆಕ್ಯುರಿಟಿ ಮಾತ್ರ ಇರುವುದು. ಫೋರಂನಲ್ಲಿ ಕಾರಿನ ಢಿಕ್ಕಿ ತೆಗೆಸಿ ನೋಡುತ್ತಾರೆ. ಏನ್ ಬಾಂಬ್ ಅನ್ನು ಯಾವನಾದ್ರೂ ಢಿಕ್ಕಿಯಲ್ಲಿ ಇಟ್ಕಂಡು ಬಂದಿರ್ತಾನಾ ಅಂತ ಪ್ರಶ್ನೆ ಮನಸ್ಸಲ್ಲಿ ಬಂದಿತ್ತು. ಇನ್ನೊಂದು ವಿಚಾರ ಅಂದ್ರೆ ಎಲ್ಲಾ ಕಡೆಯೂ ಇಲ್ಲಿನ ಭಾಷೆ ಬರದೇ ಇರೋ ಸೆಕ್ಯುರಿಟಿ ಗಾರ್ಡ್ ಗಳೇ ಜಾಸ್ತಿ. ನಾವು ಹೇಳಿದ್ದು ಅವರಿಗೆ ತಿಳಿಯಲ್ಲ, ಅವರು ಹೇಳಿದ್ದು ನಮಗೆ ತಿಳಿಯಲ್ಲ. ಅಂದ ಮೇಲೆ ಇವರು ಸೆಕ್ಯುರಿಟಿ ಕೊಡೋದು ಅಷ್ಟರಲ್ಲೇ ಇದೆ.

V.R.BHAT said...

ಲೇಖನ ಸಮರ್ಪಕವಾಗಿದೆ, ಯುಗಾದಿಯ ಶುಭಾಶಯಗಳು

ಸಾಗರದಾಚೆಯ ಇಂಚರ said...

ತುಂಬಾ ಒಳ್ಳೆಯ ಲೇಖನ
ಪ್ರಸ್ತುತ ಸ್ತಿತಿಗೆ ಒಪ್ಪುವ ಬರಹ

akshata said...

ನಿಮ್ಮ ಅಭಿಪ್ರಾಯ ಸರಿಯಾದ್ದೆ, ಈಗಶ್ಹ್ಟೆ ಕೆಳಗೆ ವಾಕ್ ಮಾಡುವಾಗ ನಮ್ಮ ಬಿಲ್ಡಿಂಗ್ ನ ಚಿಕ್ಕ ಹರೆಯದ, ಸಣಕಲು ಕಡ್ಡಿಯಂತಿರುವ ವಾಚ್ಮನ್‌ನನ್ನು ನೋಡಿ ಹಾಗೆಯೇ ಅನಿಸಿತು. ಸಮಯವಿದ್ದಾಗ ನನ್ನ ಬ್ಲಾಗನ್ನೂ ವೀಕ್ಷಿಸಿ ಪ್ರತಿಕ್ರಿಯೆ ಕೊಡಿ.
ಅಕ್ಷತಾ.
www.tadbhava.blogspot.com

Lakshmi Shashidhar Chaitanya said...

shankranna,

samayochita baraha. security andhre enu, hegirbeku, ellelli irbeku, esht irbeku, ivella prashnegalanna bhaaratadalli keLbaardu. security guards themselves are insecure in thic country shankranna, how will they make others secure ? naanu ee deshana baitilla, aadare ee deshadalli naav ene maadbekaadru adu ankonda haage implement maadakke aagalla, for two very obvious reasons- 1. ever increasing population 2. ever evolving corruption !

iveradu problems e moola terrorism ge nanna prakaara. naavu terror inda secure aagbeku andhre modlu iveradu problemsu secure aagi kootidyalla nam deshadalli,avanna control ge tarbeku. aaga, security anno padakke artha, taatparya, bhaavartha, anushaasana, ivella sigatte.

Me, Myself & I said...

ಕೇವಲ ಭದ್ರತೆ ಒಂದೇನಾ?
ಶಿಕ್ಷಣ, ಕಾನೂನು, ರಾಜಕೀಯ, ವ್ಯವಹಾರ????

Ravi Hegde said...

ಶಂಕರ ಸರ್,
ಎಲ್ಲಿ ನೋಡಿದರಲ್ಲಿ ಸೆಕ್ಯೂರಿಟಿ ಪೇದೆ ಗಳು ,CCTV ಇತ್ಯಾದಿ ಉಪಕರಣಗಳು ಪ್ರಯೋಜನವಿಲ್ಲ..ಎಲ್ಲ ಓಳು ಸರ್,
ಒಂದಷ್ಟು ಉದ್ಯೋಗ ಸೃಷ್ಟಿಯಾಗಿದೆ..
ನೇಪಾಳಿ ಯುವಕರಿಗೆ ದಾರಿ ದೀಪವಾಗಿದೆ..

ರವಿ.

Anonymous said...

Hello!
I happened to stumble upon your comment in facebook on Ravana and also some accompanying comments on Seetha parityaga by you. Its my humble wish that such discussions be not held on such cursory levels that the predominantly under read internet community make a mess of Indian classics by having little understanding of the subject matter yet passing judgemental comments on the same. In order to facilitate a more meaningful discussion, I post you this. I hope you can reproduce this in your face book activity and have a more meaningful dialogue.
"ಸೀತಾ ಪರಿತ್ಯಾಗ"
ಅಪವಾದ :
ಲಂಕಾಮಪಿ ಪುರಾನೀತಾ ಅಶೋಕವನಿಕಾಂ ಗತಾಂ,
ರಕ್ಷಸಾಂ ವಶಮಾಪನ್ನಾಂ ಕಥಂ ರಾಮೋ ನ ಕುತ್ಸ್ಯತಿ ||

ಅಸ್ಮಾಕಮಪಿ ದಾರೇಷು ಸಹನೀಯಮ್ ಭವಿಷ್ಯತಿ ,
ಯಥಾ ಹಿ ಕುರುತೇ ರಾಜಾ ಪ್ರಜಸ್ತಮನುವರ್ತತೀ ||

ಹೇಗೆ ಭದ್ರನು ಜನಾಪವಾದವನ್ನು ತಿಳಿಸುತ್ತಾನೆ.

ಆಗ ರಾಮನು ತನ್ನ ತಮ್ಮಂದಿರನ್ನು ಅಭಿಪ್ರಾಯ/ಚರ್ಚೆಗೆ ತನ್ನ ಭವನಕ್ಕೆ ಆಹ್ವಾನಿಸುತ್ತಾನೆ.
ವಾಲ್ಮೀಕಿ ಮಹರ್ಷಿಗಳು ಆ ಸನ್ನಿವೇಶವನ್ನು ಹೇಗೆ ವರ್ಣಿಸುತ್ತಾರೆ.

ಆಜ್ಞ ಪ್ತಾಸ್ತು ನರೇಂದ್ರೆನ ಸಮಾಹಿತಾ: ಕುಮಾರಾ: ||

ಬಾಷ್ಪ ಪೂರ್ಣೆ ಚ ನಯನೆ ದೃಷ್ತ್ವ ರಾಮಸ್ಯ ಧೀಮತ: |
ಹತಶೋಭಂ ಯಥಾ ಪದ್ಮ ಮುಖಂ ವೀಕ್ಷ್ಯ ಚ ತಸ್ಯ ತೆ||

ನಂತರ ಹೀಗೆ ಹೇಳುತ್ತಾನೆ (ರಾಮ)

ಪೌರಾಪವಾದ: ಸುಮಾಹ್ನ್ಸ್ಥತ ಜನಪದಸ್ಯ ಚ
ವರ್ತತೆ ಮಾಯಿ ಭೀಭತ್ಸಾ ಸಾ ಮೇ ಮರ್ಮಾನಿ ಕ್ರುನ್ತತಿ||

ಪಟ್ಟನಿಗರು , ಹಳ್ಳಿಯವರು ನನ್ನ ವಿಷಯದಲ್ಲಿ ee ಕುತ್ಸಿತ ಭಾವನೆ ಇತ್ತುಕೊಂದಿದಾರೆಮ್ಬುದು ನನ್ನ ಶೂಲದಂತೆ ಇರಿಯುತ್ತಿವೆ (ಭಾವಾರ್ಥ)

ಸೀತಾಯಣ

ಸೀತಾ ಪರಿತ್ಯಾಗದ ಬಗ್ಗೆ ಅನೇಕ ಆಧುನಿಕರು ಹತ್ತು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

ಸೀತಾ ಮಾತೆಯ ಪರಿಶುದ್ಧತೆಯ ಬಗ್ಗೆ ಸಂಪೂರ್ಣ ಜ್ನಾನವಿದ್ದರೂ ಸಹ ಆಕೆಯನ್ನು (ತನಗೆ ಲೋಕಾಪವಾದ ಬರಬಾರದೆಂದು ) ನಿಷ್ತುರನಾಗಿ ,ಕರುಣೆಯಿಲ್ಲದೆಯೇ ಕಾಡಿಗೆ ಕಳುಹಿಸಿದ್ದು ಎಷ್ಟರ ಮಟ್ಟಿಗೆ ಸರಿ?

ಈ ಒಂದು ಪ್ರಶ್ನೆಯನ್ನು ಬೇರೆ ರೀತಿಯಲ್ಲಿ ವಿಚಾರ ಮಾಡಿ ನಮ್ಮ ಆಧುನಿಕರು ವಿಶ್ಲೇಷಿಸುವುದೆಂದರೆ , ರಾಮನ ಕಾಲದಲ್ಲಿ ಸಮಾಜವು ಪುರುಷ ಪ್ರಧಾನವಾಗಿದ್ದು , ಅಲ್ಲಿ ಸ್ತ್ರೀಯರನ್ನು ಪುರುಷರು ಮನ ಬಂದಂತೆ ನಡೆಸಿಕೊಳ್ಳಬಹುದಿತ್ತೆಂದು ವ್ಯಾಖ್ಯಾನಿಸುತ್ತಾರೆ.

ಇದು ಬಹಳ ಕುತ್ಸಿತವಾದ ವಾದ.ಮೊದಲನೆಯದಾಗಿ ಸ್ತ್ರೀಯೋಬ್ಬಳಿಗೆ ಅನ್ಯಾಯವಾಯಿತೆಂದು ಅಂತ:ಕರಣ ಕಲಕಿ ಈ ಮಾತುಗಳನ್ನಾಡಿದರೆ ಒಪ್ಪಿಕೊಳ್ಳಬಹುದೇನೋ( ಅಥವ ಅರ್ಥ ಮಾಡಿಸಬಹುದೇನೋ).ಆದರೆ ಈ ಒಂದು ಪ್ರಸಂಗವನ್ನು ಇಟ್ಟುಕೊಂಡು ಶ್ರೀ ರಾಮನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಖಂಡನೀಯವೆನ್ನಬಹುದು.

ಆದರೂ ಮೇಲ್ನೋಟಕ್ಕೆ ರಾಮ ತಪ್ಪು ಮಾಡಿದನೆಂಬುದು ಸಾಮಾನ್ಯ ತಿಳುವಳಿಕೆಯಷ್ಟೇ.ಈ ವಾದದಲ್ಲಿ ಯಾವುದೇ ಸತ್ಯವಿಲ್ಲ.ರಾಮನನ್ನು ದೂಶಿಸುವವರು ಸ್ವಯಮ್ ಸೀತಾ ದೇವಿಯನ್ನೇ ತಪ್ಪಾಗಿ ಅರ್ಥ ಮಾಡಿಕೊಂಡಂತೆ.
ಪ್ರಜಾ ಸಂತೃಪ್ತಿ, ರಾಜನೋಬ್ಬನ ಅಪವಾದ ರಹಿತತೆ ಮೊದಲಾದ ಧ್ಯೇಯಗಳು,ಅನಿವಾರ್ಯತೆಗಳನ್ನು ಮುಂದಿಟ್ಟುಕೊಂಡು ಪರಾಮರ್ಶಿಸಬೇಕಾಗುತ್ತದೆ.

ತನಗೆ ಅತ್ಯಂತ ಪ್ರಿಯವಾದುದನ್ನು ಪ್ರಾಣ ಸಮಾನವಾದುದನ್ನು ತ್ಯಜಿಸುವ ಮನೋಸ್ಥೈರ್ಯ ಸಾಮಾನ್ಯರಿಗೆ ಇರುವುದಿಲ್ಲ.ಈ ದೃಷ್ಟಿಯಿಂದ ನೋಡಿದರೆ ಸೀತಾ ಮಾತೆಗೆ ರಾಮನ ನಿರ್ಣಯದಿಂದ ಅತೀವ ದು:ಖವಾಗಿದ್ದರೂ ,ಆಕೆಯನ್ನು ತ್ಯಜಿಸುವ ನಿರ್ಧಾರವನ್ನು ರಾಮನು ತೆಗೆದುಕೊಂದಿದ್ದನ್ನು ನೋಡಿದರೆ,ಅವನು ತನ್ನ ವಯುಕ್ತಿಕ ಜೀವನಕ್ಕಿಂತಲೂ ಪ್ರಜಾ ಜೀವನಕ್ಕೆ ಎಷ್ಟರ ಮಟ್ಟಿನ ಗೌರವ ಕೊಟ್ಟಿದ್ದ ಎಂಬುದು ತಿಳಿಯುತ್ತದೆ.

Anonymous said...

ಆದರ್ಶದ ಮಾರ್ಗವೇ ಹಾಗೆ.ನೇರ ಹಾಗು ನಿಷ್ತುರ.
ಶ್ರೀ ರಾಮಚಂದ್ರನು ಸ್ವತ: ಸುಖವನುಭವಿಸಲಿಲ್ಲ, ಸೀತಾ-ರಾಮರ ತ್ಯಾಗಮಯ ತಪಸ್ಸು, ವೈಯುಕ್ತಿಕ ಜೀವನವನ್ನು ನಿಕೃಷ್ಟವಾಗಿ ಕಾಣುವ ಛಾತಿ - ಇವೆಲ್ಲವೂ ಮಹೋನ್ನತ ಗುಣಗಳೇ.

ರಾಮಾಯಣದ ಅಂತರ್ಯವನ್ನು ಗ್ರಹಿಸದವರಿಗೆ, ಈ ಪ್ರಶ್ನೆಗಳು ಉದ್ಭವಿಸುವುದರಲ್ಲಿ ಆಶ್ಚರ್ಯವೇನಿಲ್ಲ

ಸೀತಾ ಪರಿತ್ಯಾಗ.
ಶ್ರೀ ರಾಮ ಹೀಗೆ ಹೇಳುತ್ತಾನೆ,

ಅಪ್ಯಹಂ ಜೀವಿತಂ ಜಹ್ಯಾ0 ಯುಶ್ಮಾನ್ವಾ ಪುರುಷರ್ಶಭ :
||

"ಅಪವಾದದ ಭಯದಿಂದ ಪ್ರಾಣವನ್ನಾದರೂ ಬಿಟ್ಟೇನು.ಪುರುಷ ಶ್ರೇಷ್ಠರೆ , ನಿಮ್ಮನ್ನಾದರೂ ಬಿಟ್ಟೇನು ,ಇನ್ನು ಸೀತೆಯ ವಿಷಯದಲ್ಲಿ ಹೇಳುವುದೇನು? ಎಂದು ಪ್ರಜೆಗಳ ತೃಪ್ತಿಗೆ ಹೇಳುವ ರಾಮನು,

" ಅಂತರಾತ್ಮಾ ಚ ಮೇ ವೇತ್ತಿ ಸೀತಾಂ ಶುದ್ಧಾಂ ಯಶಸ್ವಿನೀಮ್ " ಹೇಗೆ ಸೀತೆಯ ಪರಿಶುದ್ಧತೆಯಾ ಬಗ್ಗೆ ನನಗೆ ಕಿಂಚಿತ್ತೂ ಸಂದೇಹವಿಲ್ಲ ಎನ್ನುತ್ತಾನೆ.ಈ ವಿಚಾರವನ್ನು ನಾವು ಗಮನಿಸಬೇಕು.ರಾಮನು ಆ ಒಂದು ಸನ್ನಿವೇಶದಲ್ಲಿ ವ್ಯತಿರಿಕ್ತವಾಗಿ ವರ್ತಿಸಿದ್ದರೆ ಹೇಗಿರುತ್ತಿತ್ತು?!

(>> ನಾವು ಸೀತಾ -ರಾಮರನ್ನು ಆದರ್ಶವೆಂದು ಒಪ್ಪಿಕೊಳ್ಳುತ್ತೇವೆ ಹೊರತು , ಸಲೀಂ -ಅನಾರ್ಕಲಿಯರನ್ನಲ್ಲ !<<)

ಅಪವಾದ ಭಯಾದ್ಭೀತ: ಕಿಮ್ ಪುನರ್ಜನ್ಮಕಾತ್ಮಜಾಂ

ಇನ್ನು ನಾವು ಗಮನಿಸಬೇಕಾದ ವಿಚಾರವೆಂದರೆ ಸೀತೆಯ ಪಾತ್ರ.
ತ್ಯಾಗದಲ್ಲಿ ಆಕೆ ರಾಮನಿಗೆ ಸರಿ ಸಮಾನಳು.

"ಶ್ರೀರಾಮನು ಯಾವ ಅಪರಾಧಕ್ಕಾಗಿ ನಿನ್ನನು ತ್ಯಜಿಸಿದನು ಎಂದು ಮುನಿ ಜನರು ನನ್ನನ್ನು ಪ್ರಶ್ನಿಸಿದರೆ ನನ್ನ ಯಾವ ಅಪರಾಧವನ್ನು ಹೇಳಿಕೊಳ್ಳಲಿ? ನಾನೀಗಲೇ ನನ್ನನ್ನು ಗಂಗೆಯಲ್ಲಿ ಅರ್ಪಿಸಿಬಿಡುತ್ತಿದ್ದೆ. ಆದರೆ ನನ್ನ ಪತಿಯ ವಂಶ ವಿನಾಶವಾಗುತ್ತದೆಂಬ ಭಯವೂ ನನ್ನನು ತಡೆದು ಹಿಡಿದಿದೆ " ಎನ್ನುತ್ತಾಳೆ ಸೀತೆ.

ಸೀತೆ ವಾಲ್ಮೀಕಿಯ ಆಶ್ರಮಕ್ಕೆ ಹೋದಾಗ, ಅವರು " ಜನಕಸ್ಯ ಸುತಾ ರಾಜ್ಞ: ಸ್ವಾಗತಂ ತೆ ಪತಿವ್ರತೆ" ಎಂದು ಸಂಬೋಧಿಸುತ್ತಾರೆ. ಹೀಗೆ ಸ್ವಯಂ ವಾಲ್ಮೀಕಿ ಮಹರ್ಷಿಗಳೇ ಆಕೆ ಪತಿವ್ರತೆ , ನಿರ್ದೋಷಿ ಎಂಬುದನ್ನು ನಿಶ್ಚಯ ಪಡಿಸುತ್ತಾರೆ.
ಹೀಗೆ ಸೀತ ಪರಿತ್ಯಾಗದ ವಿಚಾರದಲ್ಲಿ, ರಾಮನನ್ನು ದೂಷಿಸುವುದು ರಾಮಾಯಣದ ಇತರ ಸನ್ನಿವೇಶಗಳನ್ನು ಮರೆತು ಹೇಳುವ ಮಾತಾಗಿದೆ, ಅಂತೆಯೇ ಸ್ವಯಮ್ ಸೀತ ಮಾತೆಯನ್ನೇ ಅರ್ಥಮಾಡಿಕೊಳ್ಳದೆ ಇರುವುದಾಗಿದೆ.

ಸೀತೆಯು ಕಾಡಿಗೆ ಹೊರಡುವ ಮೊದಲು ರಾಮನಿಗೆ ಹೇಳುವ ಮಾತು ಮನನೀಯ.
"ಅಹಂ ತ್ಯ್ಕತಾ ಚ ಮೇ ವೀರ ಅಯಶೋಬೀರುಣ ಜನೇ.ಮಯಾ ಚ ಪರಿಹರ್ತವ್ಯಂ ತ್ವಂ ಹಿ ಮೇ ಪರಮಾ ಗತಿ: " ( ಉತ್ತರ ಕಾಂಡ - ಸರ್ಗ -೪೮ -೧೩)

"ಲೋಕಾಪವಾದಕ್ಕೆ ಹೆದರಿ ನೀ ನನ್ನ ಪರಿತ್ಯಜಿಸಿರುವೆ. ಲೋಕದ ಪ್ರಜೆಗಳು ನಿನ್ನನ್ನು ಯಾವ ಕಾರಣಕ್ಕಾಗಿ ನಿಂದಿಸುತ್ತಿರುವರೋ ಅಥವ ನನ್ನನ್ನು ಕಾರಣಳನ್ನಾಗಿ ಮಾಡಿಕೊಂಡು ನಿನ್ನ ಮೇಲೆ ಅಪವಾದ ಹೊರೆಸುತ್ತಿರುವರೋ - ಅದನ್ನು ಪರಿಹರಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ ಅಂತೆಯೇ ಅದು ನನ್ನ ಧರ್ಮವೂ ಕೂಡ ಏಕೆಂದರೆ ನನಗೆ ನೀನೆ ಪರಮಾಶ್ರಯನಾಗಿರುವೆ.! "

ಹೀಗೆ ಈ ತ್ಯಾಗದಿಂದ ರಾಮನೂ ಸೀತಾ ಮಾತೆಯಷ್ಟೇ ದು:ಖಿ.ಸೀತೆಯಾದರೋ ಯಾ:ಕಶ್ಚಿತ್ ಪಾಪ ಮಾಡದಿದ್ದರೂ ಸಹ ಜನಾಪವಾದದಿಂದ ದು:ಸ್ಥಿತಿಗೆ ಬಿದ್ದ ಸಾಧ್ವಿ.ಯಾವುದೇ ತ್ಯಾಗವು ಸುಖವಲ್ಲ...ಆದರ್ಶ ಜೀವನದ ನಡೆಗಳೇ ಹೀಗೆ.

ಧರ್ಮ-ಅಧರ್ಮಗಳ ವಿವೇಚನೆಯ ದೃಷ್ಟಿಯಿಂದ ನೋಡಿದಾಗ ರಾಮನು ಜನಪರಿಪಾಳನೆಯ ಆದರ್ಶಕ್ಕೆ ಸ್ವಸುಖವನ್ನು ತ್ಯಾಗ ಮಾಡಿರುವುದು ಕಂಡು ಬರುತ್ತದೆ.
ಈ ಹಿನ್ನಲೆಯಲ್ಲಿ ಸೀತ ಪರಿತ್ಯಾಗವನ್ನು ಅರ್ಥ ಮಾಡಿಕೊಳ್ಳಬೇಕು

Shankar Prasad ಶಂಕರ ಪ್ರಸಾದ said...

ನಿಮ್ಮ ವ್ಯಾಖ್ಯಾನಕ್ಕೆ ನನ್ನ ನಮನಗಳು ಹಾಗು ಇಷ್ಟು ಸಮಾಧಾನವಾಗಿ ವಿಶ್ಲೇಷಿಸಿರುವುದಕ್ಕಾಗಿ ನನ್ನ ಅಭಿನಂದನೆಗಳು.
ಇದರಲ್ಲಿ ನಾನು ಯಾವುದನ್ನೂ ಅಲ್ಲಗಳೆಯುತ್ತಿಲ್ಲ, ಆದರೂ ನಾನು ಹೇಳಲು ಹೊರಟಿದ್ದು, ಬರೀ ರಾವಣನನ್ನು ಒಬ್ಬ ಕೇಡಿಯಾಗಿ ಬಿಂಬಿಸುವ ಜನರನ್ನು ಖಂಡಿಸಿ.
ಇದರ ಮೇಲೆ ನಾನು ಏನನ್ನೂ ಹೇಳಲು ಬಯಸುವುದಿಲ್ಲ.

ತಪ್ಪಿದ್ದಲ್ಲಿ, ನೋವಾದಲ್ಲಿ ಕ್ಷಮೆ ಕೋರುವ,

ಕಟ್ಟೆ ಶಂಕ್ರ

Anonymous said...

Hello Shankar.

My apologies if I was tad too carried away in my previous comments and ended up writing something, which perhaps wasn't exactly all too essential. It's just that I am at times frustrated with the superfluous views of many individuals on the internet and it certainly does not include you.

Please do not ask for forgiveness as I am not an emotive individual to take such issues personally. Moreover, I am much younger than you too. Happy blogging and wish you godspeed in all your future endeavors.