Thursday, March 19, 2009

ಟಾಯ್ಲೆಟ್ಟಲ್ಲಿ ಸಾಸರ್ !!

ನಿನ್ನೆ (18th March 2009) ನಮ್ಮ ಕಂಪೆನಿಯ ಒಂದು Get-Together ಪಾರ್ಟಿ ಇತ್ತು ಅಂತಾ ಹ್ಯಾಂಬರ್ಗ್
ನಗರದ ಬಂದರು (Port) ಆಗಿರುವ Landungsbrucken ಅನ್ನೋ ಜಾಗಕ್ಕೆ ಹೋಗಿದ್ದೆ.
ಪಾರ್ಟಿ ಇದ್ದದ್ದು ಒಂದು De-Commissionned (Retired) Freighter ಹಡಗಿನಲ್ಲಿ.
ಹಡಗಿನ ಹೆಸರು CAP - SAN DIEGO. 1960ನೆ ಇಸವಿಯ ಆಸುಪಾಸಿನ ಸರಕು ಸಾಗಾಣಿಕೆಯ ಹಡಗು ಇದು. ಇವಾಗ ಪ್ರವಾಸಿ ಆಕರ್ಷಣೆಯಾಗಿದೆ.

ಬೈಕೋಬೇಡಿ, ಇದರ ಬಗ್ಗೆ ಪಿಟೀಲು ಕುಯ್ದು ಬೋರ್ ಮಾಡೋದಿಲ್ಲ. ಪಾರ್ಟಿ ನಡೆಯುವಾಗ ಜಲಬಾಧೆ ತೀರಿಸಲು ಟಾಯ್ಲೆಟ್ಟಿಗೆ ಹೋದೆ. ಇಲ್ಲಿ ಮತ್ತೊಂದು ಡಿಜೈನಿನದ್ದು ಕಂಡಿತು. ಮಧ್ಯಭಾಗದಲ್ಲಿ ಸಾಸರಿನ (SAUCER) ಥರ ಇದೆ. ಜೊತೆಗೆ ಇದರ ಗೋಡೆಯ ಮೇಲೂ ಕೂಡಾ ಒಂದು ಹುಳುವಿನ ಚಿತ್ರ ಪ್ರಿಂಟ್ ಮಾಡಿದಾರೆ. ಆದ್ರೆ ಅದು ಈ ಚಿತ್ರದಲ್ಲಿ ಅಷ್ಟೊಂದು ಕ್ಲಿಯರ್ ಆಗಿ ಕಾಣೋದಿಲ್ಲ (ಲೈಟಿಂಗ್ ಕಮ್ಮಿ ಇತ್ತು ಕಣ್ರೀ ಅಲ್ಲಿ).

ನೋಡಿ...


ಇನ್ನೂ ಅದೆಷ್ಟು ಡಿಜೈನ್ ಡಿಜೈನ್ ಟಾಯ್ಲೆಟ್ಟನ್ನು ಉಪಯೋಗಿಸುತ್ತೀನೋ, ನಿಮಗೆ ಅದರ ದರ್ಶನ ಮಾಡುಸ್ತೀನೋ ಗೊತ್ತಿಲ್ಲ.
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, March 17, 2009

ಆಟೋ ಅಣಿಮುತ್ತುಗಳು - ೫೭ - ಹಾರ್ಟಿದೆ

ಬಹಳಾ ದಿನಗಳಾದ ಮೇಲೆ ಇವತ್ತು ಮತ್ತೊಂದು ಆಟೋ ಅಣಿಮುತ್ತು ಹಾಕ್ತಾ ಇದ್ದೀನಿ.
ಇದನ್ನು ಕಳ್ಸಿದ್ದು ಮಿತ್ರ ಹೇಮಂತ.
ಹೀಗೆ ಬಹಳಷ್ಟು ಮಂದಿ, ನಂಗೆ "ಶಂಕ್ರ, ಈ ಆಟೋ ಫೋಟೋ ತೆಗ್ದಿದೀನಿ, ಬ್ಲಾಗಿನಲ್ಲಿ ಹಾಕು" ಅಂತಾ ಕಳುಸ್ತಾರೆ.
ನಿಮ್ಮೆಲರ ಅಭಿಮಾನಕ್ಕೆ ಬಹಳಾ ಥ್ಯಾಂಕ್ಸ್.

ಇದನ್ನ ನೋಡಿ, ಈ ಅಣ್ಣ ಹೇಳಿರೋದು "ಆಟೋದವರಿಗೂ ಹಾರ್ಟಿದೆ, ಪ್ರೀತ್ಸೆ"
ಯಾಕೆ ಈ ಥರ ಬರೆಸಿದ್ದಾನೆ ಈತ ?

------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, March 11, 2009

ಕನ್ನಡಪ್ರಭ ಓದಿ ಅಂದವಾದ ಅಂಧ !!

ಇವತ್ತಿನ ಕನ್ನಡಪ್ರಭ ಆನಲೈನ್ ಆವೃತ್ತಿಯಲ್ಲಿ ಕಂಡಿದ್ದು.
ಕನ್ನಡಪ್ರಭ ಕೂಡಾ ಈ ರೀತಿಯಾದ ತಪ್ಪು ಮಾಡ್ತಾರ ಅಂತ ಆಶ್ಚರ್ಯ ಆಯ್ತು.
ಅಂದ ಹಾಗು ಅಂಧ ಗೂ ವ್ಯತ್ಯಾಸ ಗೊತ್ತಿಲ್ವಾ ಇವ್ರಿಗೆ ?


------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, March 6, 2009

ನನ್ನ ಪುನರ್ಜನ್ಮ ಹಾಗು ಪೂರ್ವಜನ್ಮ ಸ್ಮರಣೆ

ಶಂಕ್ರಂಗೆ ಇದೇನಾಯ್ತಪ್ಪಾ ? ಸುಮ್ನೆ ಆಟೋ, ಟಾಯ್ಲೆಟ್ಟು ಫೋಟೋ ತೆಕ್ಕೊಂಡು ಇದ್ದೋನು ಸಡನ್ನಾಗಿ ಮರುಜನ್ಮ, ಪೂರ್ವಜನ್ಮ ಸ್ಮರಣೆ ಅಂತಾ ಏನೇನೋ ಮಾತಾಡ್ತಾ ಇದಾನಲ್ಲ ಅನ್ಕೊತಾ ಇದ್ದೀರಾ?

ಹಂಗಲ್ಲಾ ಕಣ್ರೀ ಕಟ್ಟೆ ಮಿತ್ರರೇ, ಅವತ್ತೊಂದು ಭಾನುವಾರ, (ಸುಮಾರು ಮೂರು ವಾರಗಳ ಹಿಂದೆ) ಹೊರಗೆ ಸಖತ್ ಸ್ನೋಫಾಲ್ ಜೊತೆಗೆ ಮಳೆ. ಹಾಗಾಗಿ ಎಲ್ಲೂ ಹೋಗದೆ ಮನೇಲಿ ಕೂತಿದ್ದೆ. ಅವಾಗ ಬಂದ ಯೋಚನೆ ಇದು.
ಸ್ವಲ್ಪ ದೊಡ್ಡದಿದೆ ಈ ಬರಹ, ದಯವಿಟ್ಟು ಹೊಟ್ಟೆಗಾಕ್ಕೊಬೇಕು ಬಾಂಧವರು

ಇಲ್ಲಿ ಜರ್ಮನಿಯಲ್ಲಿ ಇರುವ ಸವಲತ್ತುಗಳು, ಒಂದು ಜೀವಕ್ಕಿರುವ ಮರ್ಯಾದೆ / ಬೆಲೆ ಕಂಡು, ಮುಂದಿನ ಜನ್ಮ ಅಂತ ಏನಾದರೂ ಇದ್ದಲ್ಲಿ, ಈ ದೇಶದಲ್ಲೇ ಹುಟ್ಟಬಯಸ್ತೀನಿ, ಅಂತ ಹೇಳಿದ್ದು.
ಯಪ್ಪೋ.. ತಡೀರಿ ಸ್ವಲ್ಪ..ಏನು ಈ ನನ್ ಮಗಾ ಈ ಥರ ಹೇಳ್ತಾನಲ್ಲ ಅಂತಾ ಉಗ್ಯೋಕ್ಕೆ ಮುಂಚೆ ಸ್ವಲ್ಪ ಓದಿ.
ನಾನು ಈ ದೇಶದಲ್ಲಿ ಮುಂದಿನ ಜನ್ಮದಲ್ಲಿ ಹುಟ್ಟಬಯಸ್ತೀನಿ ಅಂತ ಹೇಳಿದ್ನಲ್ಲ, ಆ ಫ್ಯಾಂಟಸಿಯನ್ನು ಯಾವ ರೀತಿಯಲ್ಲಿ ಮುಂದಕ್ಕೆ ತಗೊಂಡು ಹೋದೆ ಅನ್ನೋದನ್ನ ಕೇಳಿ. ನನ್ನ ಮುಂದಿನ ಜನ್ಮ ಹೇಗಿರಬೇಕು ಅನ್ನೋದನ್ನ ನಾವೇ ಸೆಲೆಕ್ಟ್ ಮಾಡೋ ಹಾಗಿದ್ರೆ, ಯಾವ ರೀತಿ ಮಾಡ್ತಾ ಇದ್ದೆ ಅಂತ.

ಮೊದಲನೆಯದಾಗಿ ಇಲ್ಲಿ (ಜರ್ಮನಿಯಲ್ಲಿ) ಒಂದು ಒಳ್ಳೆ ವಿದ್ಯಾವಂತ ಫ್ಯಾಮಿಲಿಯಲ್ಲಿ ಹುಟ್ಟಬಯಸ್ತೀನಿ. ತಕ್ಕ ಮಟ್ಟಿಗೆ ಬುದ್ಧಿ ಬಂದ ಮೇಲೆ, ನನಗೆ ಪೂರ್ವಜನ್ಮದ ಸ್ಮರಣೆ ಬರಬೇಕು. ಫಿಲಂ ನಲ್ಲಿ ತೋರಿಸೋ ಹಾಗೆ ನೆಗೆಟಿವ್ ಇಮೇಜ್ ಅಲ್ಲಾ, ಫ್ರೇಂ ಟು ಫ್ರೇಂ ಜ್ಞಾಪಕ ಬರಬೇಕು. ನಾನು ಹಿಂದಿನ ಜನ್ಮದಲ್ಲಿ "ಮಂದಗೆರೆ ಶಂಕರ ಪ್ರಸಾದ" ಆಗಿದ್ದೆ. ಹುಟ್ಟಿದ್ದು ಮೈಸೂರು, ಮಾತೃಭಾಷೆ ಕನ್ನಡ.

ಶಂಕರನ ಬದುಕು ಜ್ಞಾಪಕ ಬರ್ತಾ ಇದ್ದ ಹಾಗೆ ನ್ಯಾಚುರಲಿ ಅವನ ಹಾಗೆ ಕನ್ನಡದ ಬಗ್ಗೆ ಒಲವು ಬಂದೆ ಬರುತ್ತೆ. ಹಾಗಾಗಿ ಎಲ್ಲೂ ಕನ್ನಡ ಕಲಿಯುವುದು ಬೇಕಿಲ್ಲ. ಆಟೋಮ್ಯಾಟಿಕ್ ಆಗಿ ಅದೂ ಕೂಡ ಬಂದಿರುತ್ತೆ. To The Core ಅಂತಾರಲ್ಲ ಹಾಗೆ. ಅದೇ, ಓದಲು, ಬರೆಯಲು ಚೆನ್ನಾಗಿ ಬರುತ್ತೆ. ಹಾಗೆಯೇ ನಮ್ಮ ಮೈಸೂರಿನ ಭಾಷೆ ನಿರರ್ಗಳವಾಗಿ ಬಂದಿರುತ್ತೆ. ಇಷ್ಟೆಲ್ಲಾ ಜ್ಞಾಪಕ ಬಂದ ಮೇಲೆ ನ್ಯಾಚುರಲಿ, ಸೋಮಾರಿ ಕಟ್ಟೆ ಬ್ಲಾಗಿನ Username ಮತ್ತು Password (Last saved) ಕೂಡ ಜ್ಞಾಪಕ ಬಂದೆ ಬರುತ್ತೆ ಅಲ್ವ?

ಹೀಗಾದ ಮೇಲೆ "ಶಂಕರ ಸತ್ತ ನಂತರ ನಿಂತಿದ್ದ ಸೋಮಾರಿ ಕಟ್ಟೆಯನ್ನ ಮತ್ತೆ ಮುಂದುವರಿಸ್ತೀನಿ" ಇಷ್ಟೆಲ್ಲಾ ಹೇಳಿದ ಮೇಲೆ, ವಯಸ್ಸಿನ ಬಗ್ಗೆ ಕೂಡಾ ಸ್ವಲ್ಪ ಹೇಳೋಣಾ. ಈಗಿರುವ ಶಂಕರ ಸುಮಾರು 70 ವರ್ಷ ಬದ್ಕಿರ್ತಾನೆ ಅನ್ಕೊಳೋಣ. ನನಗೀಗ 29 ವರ್ಷ. ಸೊ, 70ನೇ ವಯಸ್ಸಿಗೆ ಗೊಟಕ್ ಅಂದು, ಮತ್ತೆ ಜನ್ಮ ತಾಳಿ, ಆತ 24 ವರ್ಷದವನಗಿದ್ದಾನೆ ಅಂದುಕೊಂಡು ನಾನು ಯೋಚನೆ ಮಾಡಿದ ಕಥೆ / ಫ್ಯಾಂಟಸಿ ಇದು. ಅವಾಗ ಸರಿ ಸುಮಾರು 2083ನೆ ಇಸವಿ. ಜರ್ಮನಿಯಲ್ಲಿ ಹುಟ್ಟಿದ್ದರಿಂದ ನ್ಯಾಚುರಲಿ, ಬಿಳಿಯನಾಗಿ ಇರ್ತೀನಿ, ಜರ್ಮನ್ ಕೂಡ ಬರುತ್ತೆ. ಜೊತೆಗೆ ಪೂರ್ವಜನ್ಮದ ಸ್ಮರಣೆಯಿಂದ ಕನ್ನಡ ಕೂಡ ಸಖತ್ತಾಗಿ ಬರುತ್ತೆ. ಶಂಕರ ಮಾತಾಡ್ತಿದ್ದ ಹಾಗೆ ಅಪ್ಪಟ ಮೈಸೂರಿನ ಕನ್ನಡ (ಬಡ್ಡೆತ್ತದ್ದೆ, ಮುಂಡೇವಾ, ಐಕ್ಳು, ನಿನ್ನಜ್ಜಿ, ಸಿಸ್ಯಾ ಇತ್ಯಾದಿ). ಇಷ್ಟೆಲ್ಲಾ ಇದ್ದ ಮೇಲೆ, ನನ್ನ 24 ನೆ ವಯಸ್ಸಿಗೆ (ಮರುಜನ್ಮದ ಹೊಸ ಶಂಕರ) ಮೈಸೂರಿಗೆ ಒಮ್ಮೆ ಹೋಗುವ ಬಯಕೆ ಹುಟ್ಟುತ್ತೆ. ಹಾಗಾಗಿ, ಜರ್ಮನಿಯಿಂದ ಹೊರಟು ಮೊದಲು ಬೆಂಗಳೂರಿಗೆ ಬಂದಿಳಿಯುತ್ತಾನೆ, ಬಿಳಿ ಶಂಕ್ರ.

ಅಪ್ಪಟ ಬಿಳಿಯ, ಬೆಂಗಳೂರಿಗೆ ಮೊದಲು ಬಂದಿಳಿದು, ಏರ್ಪೋರ್ಟಿನಿಂದ ಹೊರಗೆ ಬರುತ್ತಿದ್ದ ಹಾಗೆ, ಒಬ್ಬನೇ ಬರ್ತಾ ಇದ್ದವನ್ನು ಕಂಡು ಟ್ಯಾಕ್ಸಿಯವರು ಮುತ್ತಿಕೊಳ್ತಾರೆ (ಜ್ಞಾಪಕ ಇರ್ಲಿ, ಬಂದಿಳಿದ ಬಿಳಿಯ ನೋಡಲು ಮಾತ್ರ ಫಾರಿನರ್ ಅಷ್ಟೆ...ಮಾತಡೋದು ಅಪ್ಪಟ ಕನ್ನಡ, ಯಾಕೆಂದ್ರೆ ಅವ್ನು ಶಂಕ್ರನ ಮರುಜನ್ಮ).

ನಾನು ಸ್ವಲ್ಪ ಮಜಾ ತಗೊಳಕ್ಕೆ "I want to go to Mysore..how much will it cost?" ಅಂತಾ ಕೇಳ್ತೀನಿ. ಈಗ ಅಂದ್ರೆ 2009ರಲ್ಲಿ, ದೇವನಹಳ್ಳಿಯಿಂದ ಟ್ಯಾಕ್ಸಿ ಮಾಡಿಕೊಂಡು ಮೈಸೂರಿಗೆ ಹೋದ್ರೆ, ಸುಮಾರು ರೂ 2000 ಆಗುತ್ತೆ. 2083ರಲ್ಲಿ ಸುಮಾರು 20,000ರೂ ಆಗಬಹುದು. 20,000 ಅನ್ಕೊಂಡಿರೋದು ಒಂದು Imaginary amount ಅಷ್ಟೇ. ಯಾರಿಗ್ಗೊತ್ತು, ಆ ಟೈಮಿಗೆ ನಮ್ಮ ರುಪಾಯಿಯ ಬೆಲೆ ಪೌಂಡ್, ಯೂರೋ, ಡಾಲರುಗಳಿಗಿಂತಾ ಜಾಸ್ತಿ ಆಗಿರಬಹುದಲ್ವಾ?

ಅವಾಗ ಒಬ್ಬ ಟ್ಯಾಕ್ಸಿಯವನು "Hello... you come from America? Mysore taxi is 40,000 Rs" ಅಂತಾನೆ. ಸಡನ್ನಾಗಿ ನಾನು ಮೈಸೂರು ಕನ್ನಡದಲ್ಲಿ "40,000 ನಾ? ಯಾಕೆ...ಜೊತೆಗೆ ನಾನ್ ಕೂಡಾ ಬಂದ್ಬಿಡ್ತೀನಿ" ಅಂದಾಗ, ಇದನ್ನ ಕೇಳಿದ ಟ್ಯಾಕ್ಸಿಯವನ ಮುಖ ಹೆಂಗಾಗಿರತ್ತೆ !!!??? ಆ ಸೀನನ್ನು ಎಂಜಾಯ್ ಮಾಡ್ಕೊಂಡು, ಅವರ ಹ್ಯಾಪ್ ಮೊರೆಯನ್ನು ನೆನೆಸಿಕೊಳ್ಳುತ್ತಾ, ಹೆಂಗೋ ಒಂದು ಟ್ಯಾಕ್ಸಿ ಬುಕ್ ಮಾಡಿಕೊಂಡು ಮೈಸೂರಿಗೆ ಬರ್ತೀನಿ. ಯಾರ ಮನೆಗೆ ಹೋಗೋದು?
2083 ಅಂದ್ರೆ, ಶಂಕರ ಟಿಕೆಟ್ ತಗೊಂಡೇ 24 ವರ್ಷ ಆಗಿದೆ. ಅದಕ್ಕೆ ಅಲ್ಲೇ ಸದರ್ನ್ ಸ್ಟಾರ್ ಹೋಟೆಲಲ್ಲಿ ರೂಮು ಬುಕ್ ಮಾಡಿಕೊಂಡೆ. ಅಲ್ಲಿ ಕೂಡ ರಿಸೆಪ್ಶನ್ ನಲ್ಲಿ "ಏನ್ ಸಾರ್? ಆರಾಮಾಗಿದೀರಾ" ಅಂತ ಕೇಳಿ ತಬ್ಬಿಬ್ಬು ಮಾಡಿದೆ.

ಮಾರನೆಯ ದಿನ ಹೋಟೆಲ್ಲಿನ ಹೊರಗೆ ಒಂದು ಆಟೋ ಹಿಡಿದು "ಕುವೆಂಪುನಗರ" ಅಂತ ಇಂಗ್ಲಿಶ್ ನಲ್ಲಿ ಹೇಳಿದೆ. ಹೊರಟ ಆಟೋ ರಾಜ. ಹಾಗೆ, ಸದರ್ನ್ ಸ್ಟಾರಿನಿಂದ ಮೆಟ್ರೋಪೋಲ್ ಸರ್ಕಲ್ ಕಡೆ ಬಂದು, ಬಲಕ್ಕೆ ತಿರುಗಿ, ಮಹಾರಾಣಿ ಕಾಲೇಜಿನ ಮುಂದೆ ಬಂದಾಗ, ಆಟೋ ರಾಜ "First time in Mysore?" ಅಂತಾ ಕೇಳಿದ.
ಅದಕ್ಕೆ ನಾನು "yes" ಅಂತಾ ಹೇಳಿದ್ದನ್ನು ಕೇಳಿ ಮನಸ್ಸಲ್ಲೇ ಸ್ಕೆಚ್ ಹಾಕ್ಕೊಂಡ ಅನ್ಸುತ್ತೆ.ಸರಿ, ಮಹಾರಾಣಿ ಕಾಲೇಜಿನ ಮುಂದೆ ಪಾಸ್ ಆಗಿ, ಹಾಗೆ ಮುಂದಕ್ಕೆ JLB ರಸ್ತೆಯಲ್ಲಿ ಸಾಗುತ್ತಾ, ರೋಟರಿ ಶಾಲೆಯ ಮುಂದೆ ಎಡಕ್ಕೆ ತಿರುಗಿಸಿ, ನಾರಾಯಣಶಾಸ್ತ್ರಿ ರಸ್ತೆಗೆ ಸೇರಿದ. ಕುವೆಂಪುನಗರಕ್ಕೆ ಹೋಗು ಅಂದ್ರೆ ಈ ರಾಜ ಸುಮ್ನೆ ಸಖತ್ತಾಗಿ ಸುತ್ತಾಡುಸ್ತಾ ಇದಾನೆ ಅಂತಾ ಗೊತ್ತಾದ್ರೂ ಕೂಡ ಸುಮ್ನೆ ಕೂತಿದ್ದೆ. ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಸದ್ವಿದ್ಯಾ ಸ್ಕೂಲಿನ ಮುಂದೆ ಬಂದು, ಹಾಗೆ ಸೀದಾ ಹೊರಟು, ಶಾಂತಲಾ ಟಾಕೀಸಿನ ಮುಂದೆ ಸಿಗ್ನಲ್ ಕ್ಲಿಯರ್ ಮಾಡಿ ಸಿದ್ದಪ್ಪ ಸ್ಕ್ವೇರ್ ಕಡೆ ನಡೆದ.

ಮಜಾ ತಗೊಳಕ್ಕೆ ಇದೆ ಸಕಾಲ ಅಂತಾ ಯೋಚನೆ ಮಾಡಿ "Hey.. hey..you want to take more money from me? Hotel people told, Kuvempunagar is not far" ಅಂತಾ ವರಾತ ತೆಗ್ದೆ.ಅದಕ್ಕೆ ಆತ "No sir, this is correct. kuvempunagar just 5 minutes". ನಾನು "Stop, i will tell to police" ಅದಕ್ಕೆ ಅವನು ಸಿಟ್ಟಾಗಿ, ರಸ್ತೆಯ ಬದಿ ಆಟೋ ನಿಲ್ಸಿ "No Police.. you give money..Ok?" ಅಂದ.

ಸಡನ್ನಾಗಿ ನಾನು "ಆಯ್ತು ಕಂಡಿದೀನಿ ಮುಚ್ಚಲೇ ಮಗನೆ... ಅವಗ್ಲಿಂದಾ ನೋಡ್ತಾ ಇದ್ದೀನಿ, ಇಡೀ ಮೈಸೂರ್ ತೋರುಸ್ತಾ ಇದ್ದೀಯ ನಿನ್ನಜ್ಜಿನಾ ಬಡಿಯ. ಏನು ಯಾಂದಳ್ಳಿ ಥರ ಕಾಣ್ತೀನಾ ನಾನು? ಮುಚ್ಕಂಡ್ ಬಲ್ಲಾಳ್ ಸರ್ಕಲ್ ಗೆ ನಡಿ ಮಗನೆ. ಕಂಪ್ಲೇಂಟ್ ಕೊಡ್ತೀನಿ ಹುಷಾರು"ಅಂತಾ ಬೈದಾಗ ಅವನಿಗೆ ಹಾರ್ಟ್ ಅಟ್ಯಾಕ್ ಆಗೋದೊಂದು ಬಾಕಿ.

ಬಲ್ಲಾಳ್ ಸರ್ಕಲ್ಲಿಗೆ ಬಂದು ಹಂಗೆ ಕಣ್ಣಾಡಿಸಿದೆ. ಈಗ ಇರೋ ಹಾಗೆಯೇ ಪಾರ್ಕಿನ ಮುಂದೆ ಹಾಗು ಲಕ್ಷ್ಮಿಪುರಂ ಸ್ಕೂಲಿನ ಕಾಂಪೋಂಡ್ ಮುಂದೆ ೨ ಚುರುಮುರಿ ಗಾಡಿ. ಹಾಗೆ ಅಲ್ಲಿಗೆ ನಡ್ಕೊಂಡು ಹೋಗಿ, ಚುರುಮುರಿ ಗಾಡಿ ಪಕ್ಕ ನಿಂತೆ. ಗಾಡಿಯವನು ಹಾಗು ಅಲ್ಲಿ ತಿನ್ನುತ್ತಾ ನಿಂತಿದ್ದ ಶಾರದಾ ವಿಲಾಸ್ ಕಾಲೇಜಿನ ಹುಡುಗರಿಗೂ, SDM ಹುಡುಗಿಯರಿಗೂ ಒಬ್ಬ ಬಿಳಿಯ ಫಾರಿನರ್ ಚುರುಮುರಿ ಗಾಡಿಗೆ ಬಂದಿದಾನೆ ಅಂತಾ ಆಶ್ಚರ್ಯ. ಈ ಬಿಳೀ ಜನ ಖಾರ ತಿನ್ನೋಲ್ಲ, ಅಂತದ್ರಲ್ಲಿ ಚುರುಮುರಿ ಹ್ಯಾಗೆ ತಿಂತಾನೆ ಇವನು ಅಂತ ಕುತೂಹಲದಿಂದ ನೋಡ್ತಾ ಇದಾರೆ.

ಅಷ್ಟರಲ್ಲಿ ಗಾಡಿಯವನು ಕೈನಲ್ಲಿ "What?" ಅಂತಾ ಕೇಳಿದ. ನಾನು ಸುಮ್ನೆ ಗಾಡಿಯಲ್ಲಿ ಏನಿದೆ ಅಂತಾ ನೋಡ್ತಾ ಇದ್ದಾಗ, ಪಕ್ಕದಲ್ಲಿ ನಿಂತಿದ್ದ ಶಾರದಾ ವಿಲಾಸಿನ ಪೋರನೊಬ್ಬ
"Hello, excuse me...This is called Churumuri. Very spicy. Do you want to eat this?" ಅಂತಾ ಕೇಳಿದ.

ಅದಕ್ಕೆ ನಾನು ಕನ್ನಡದಲ್ಲಿ "ಹೂ ಕಣ್ರೀ ತಿಂತೀನಿ..ಆದ್ರೆ ಯಾವ್ದು ಮೊದ್ಲು ತಿನ್ನೋದು ಅಂತಾ ಯೋಚನೆ ಮಾಡ್ತಾ ಇದ್ದೀನಿ. ಚುರುಮುರೀನೋ, ಸೌತೆಕಾಯೋ, ಟೊಮ್ಯಾಟೋ ಮಸಾಲೇನೋ, ನಿಪ್ಪಿಟ್ಟು ಮಸಾಲೇನೋ ಏನೂಂತಾ..."
ಈ ಥರ ಅಂದಾಗ ಇದನ್ನು ಕೇಳಿದವನು ತಾನು ಬಾಯಿಗೆ ಹಾಕ್ಕೊಂಡಿದ್ದ ಚುರುಮುರಿನಾ ಪ್ಹುರ್ರ್ರ್ ಅಂತಾ ಹೊರಗೆ ಗಾಬರಿಯಿಂದ ಉಗಿದು, ಅದು ಸ್ವಲ್ಪ ಜಾಸ್ತಿಯಾಗಿ ಮೂಗಿನಿಂದೆಲ್ಲಾ ಹೊರಗೆ ಬಂದು ಸುಮಾರು ಹೊತ್ತು ಖಾರಬ್ ಸ್ಥಿತಿಯಲ್ಲಿ ಇದ್ದ.

ಇದೆ ರೀತಿ ಸುಮಾರು 15-20 ಘಟನೆಗಳನ್ನು ಹೆಣೆದಿದ್ದೀನಿ. ಅದೂ ಬೇರೆ ಬೇರೆ ಊರಲ್ಲಿ.
ಹೋಟ್ಲಿಗೆ ಹೋಗಿ ಊಟ ಮಾಡುವಾಗ, ಬಿಟಿಎಸ್ ಬಸ್ಸಿನಲ್ಲಿ, ಮೆಜೆಸ್ಟಿಕ್ಕಲ್ಲಿ, ತರಕಾರಿ ಮಾರ್ಕೆಟ್ಟಲ್ಲಿ ಇತ್ಯಾದಿ ಇತ್ಯಾದಿ.
ಅದೆಲ್ಲಾ ಬಿಡಿ, ಜರ್ಮನಿಯಲ್ಲಿ ಇರುವ ಕನ್ನಡದವರ ಹತ್ರ ಹೋಗಿ "ಏನ್ ಮಗಾ.. ಹೆಂಗಿದೀಯ?" ಅಂತಾ ಕೇಳುದ್ರೆ ಹೆಂಗೆ?
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, March 3, 2009

ಟಾಯ್ಲೆಟ್ಟಲ್ಲಿ ಉಬ್ಬು ಡುಬ್ಬ

ಕಳೆದ ವೀಕೆಂಡು ನಮ್ಮ ಬಾಯ್ಸನ್ನು ಮೀಟ್ ಮಾಡಿ ಬರೋಣ ಅಂತಾ ಹ್ಯಾಮ್ಬರ್ಗಿನಿಂದ ಲಂಡನ್ನಿಗೆ ಹೋಗಿದ್ದೆ.
ಅಲ್ಲಿ ನಮ್ಮ ಹುಡುಗ ಶ್ರೀಕಾಂತ London School of Economics ನಲ್ಲಿ Post Graduation ಮಾಡ್ತಾ ಇದಾನೆ.
ನಾವು ನಾಲ್ಕು ಜನ ಸರಿಯಾಗಿ ಸುತ್ತಾಡಿ, ಮಜಾ ಮಾಡುದ್ವಿ. ಶನಿವಾರ ಸಂಜೆ ಶ್ರೀಕಾಂತ ಅವರ ಕಾಲೇಜಿಗೆ ಕರೆದುಕೊಂಡು ಹೋದ. ಹಾಗೆಯೆ ಅಲ್ಲಿಯ ಲೈಬ್ರರಿ ಸಖತ್ ಫೇಮಸ್ಸು. ಅಲ್ಲಿಗೂ ಹೋದ್ವಿ. ಸಖತ್ತಾಗಿದೆ, ನಮ್ಮ ಮೈಸೂರಿನ ಕುವೆಂಪುನಗರ ಪಬ್ಲಿಕ್ ಲೈಬ್ರರಿಗಿಂತಾ ದೊಡ್ಡದಿದೆ :-)

ಅಲ್ಲಿಯ ಬಗ್ಗೆ ಏನೂ ಹೇಳ್ತಾ ಇಲ್ಲ..ಸಡನ್ನಾಗಿ ಜಲಭಾದೆ ಶುರು ಆಯ್ತು. ತೀರಿಸೋಕ್ಕೆ ಅಲ್ಲಿಯ ಟಾಯ್ಲೆಟ್ಟಿಗೆ ಹೋದಾಗ ಕಂಡಿದ್ದು ಇದು. ಡುಬ್ಬ... ಇದಕ್ಕೂ ಮುಂಚೆ ಟಾಯ್ಲೆಟ್ಟಲ್ಲಿ ನೊಣ, ಜಾಲರಿ ನೋಡಿದ್ರಿ ಅಲ್ವಾ? ಹಾಗೆಯೇ ಇಲ್ಲಿ ಡುಬ್ಬ ಫಿಕ್ಸ್ ಮಾಡಿದಾರೆ. ಇದರ ಮೇಲೆ ಹುಯ್ದರೆ, ಹೊರಗೆ ಹಾರೋದಿಲ್ಲ. ಬರೀ ಹೇಳ್ತಾ ಇಲ್ಲಾ ಕಣ್ರೀ, ಸ್ವಾನುಭವದ ಮಾತುಗಳು.



------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ